ADVERTISEMENT

ಕೃಷಿ ಸಂಶೋಧನೆಗಳಿಂದ ರೈತರಿಗೆ ಲಾಭವಾಗಲಿ: ಸಚಿವ ಬಿ.ಸಿ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 13:31 IST
Last Updated 24 ಜನವರಿ 2021, 13:31 IST
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ರಾಗಿ ಬೆಳೆಯನ್ನು ವೀಕ್ಷಿಸಿದರು
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ರಾಗಿ ಬೆಳೆಯನ್ನು ವೀಕ್ಷಿಸಿದರು   

ಚಾಮರಾಜನಗರ: ‘ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಅನುಕೂಲವಾಗುವ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಮೂಲಕ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಭಾನುವಾರ ಹೇಳಿದರು.

ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಕಾಲೇಜಿನಲ್ಲಿ ವಿಜ್ಞಾನಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೃಷಿ ಕಾಲೇಜು, ಕೃಷಿ ವಿವಿಗಳು ಶೈಕ್ಷಣಿಕ ಉದ್ದೇಶದ ಸಂಸ್ಥೆಗಳು, ಇವುಗಳಿಂದ ತಮಗೆ ಏನೂ ಲಾಭವಿಲ್ಲ ಎಂಬ ಮನೋಭಾವನೆ ರೈತರು, ಸಾಮಾನ್ಯ ಜನರಲ್ಲಿದೆ’ ಎಂದು ಹೇಳಿದರು.

‘ಶನಿವಾರ ಬರಗಿಯಲ್ಲಿ ನಡೆದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ರೈತರೊಬ್ಬರ ಕಲ್ಲಂಗಡಿ ಬೆಳೆಗೆ ಬಂದಿರುವ ರೋಗದ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ಇರಲಿಲ್ಲ. ಅವರು ಹೇಳಿದ ಔಷಧಗಳ ವಿವರಗಳೆಲ್ಲವೂ ಆ ರೈತನಿಗೇ ತಿಳಿದಿದ್ದವು. ಹೀಗಾದರೆ ರೈತರಿಗೆ ಏನು ಪ್ರಯೋಜನ ಬಂತು. ವಿಜ್ಞಾನಿಗಳು ನಡೆಸುವ ಸಂಶೋಧನೆಗಳು ರೈತರಿಗೆ ಅನುಕೂಲ ಕಲ್ಪಿಸಬೇಕು. ವಿಜ್ಞಾನಿಗಳು ಅವರ ಕೈಗೆ ಸುಲಭವಾಗಿ ಸಿಗಬೇಕು’ ಎಂದು ಹೇಳಿದರು.

ADVERTISEMENT

ಕೃಷಿ ಕಾಲೇಜುಗಳು ಕೂಡ ರೈತರ ಅನುಕೂಲಕ್ಕೆ ಆಗಿಬರಬೇಕು. ಬೋಧಕರು ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಬೇಕು.ವಿದ್ಯಾರ್ಥಿಗಳಿಗೆ ಪಠ್ಯವನ್ನು ಬೋಧಿಸುವ ಜೊತೆಗೆ ರೈತರ ಕೃಷಿ ಸಂಬಂಧಿ ಬೆಳವಣಿಗೆಗೆ ಹಾಗೂ ಸಮಸ್ಯೆಗಳ ನಿವಾರಣೆಗೆ ತೊಡಗಿಕೊಳ್ಳಬೇಕು’ ಎಂದರು.

‘ಹೊಸ ತಳಿಗಳ ಸಂಶೋಧನೆ ಹಾಗೂ ಬೆಳೆಗಳಿಗೆ ತಗಲುವ ರೋಗಗಳ ನಿವಾರಣೆಗೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಕಾಲೇಜುಗಳು ಮುಂದಾದಾಗ ರೈತರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ನಿರಂತರ ಚಟುವಟಿಕೆಗಳು ನಡೆಯಬೇಕು’ ಎಂದು ಬಿ.ಸಿ.ಪಾಟೀಲ ಅವರು ಸಲಹೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.