
ಚಾಮರಾಜನಗರ: ಅರಣ್ಯದೊಳಗೆ ಪ್ರವಾಸೋದ್ಯಮ ಚಟುವಟಿಕೆಗಳ ಬದಲಾಗಿ ಕೃಷಿ ಪ್ರವಾಸೋದ್ಯಮ ಮಾಡುವ ಮೂಲಕ ರೈತರಿಗೆ ಲಾಭ ಮಾಡಿಕೊಡಬೇಕು ಎಂದು ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಜಮೀನು ಪ್ರವಾಸೋದ್ಯಮ ತಾಣವಾಗಬೇಕು, ಕೃಷಿ ವಿಶ್ವವಿದ್ಯಾಲಯಗಳಾಗಿ ಬದಲಾಗಬೇಕು. ಹೊಸ ಅನ್ವೇಷಣೆಗಳಿಗೆ ವೇದಿಕೆಯಾಗಬೇಕು, ಹಣ್ಣು, ತರಕಾರಿ, ಸಿರಿಧಾನ್ಯಗಳ ಮಹತ್ವ ಹಾಗೂ ಬೆಳೆಯುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕಾಡಿನೊಳಗೆ ಹಾಗೂ ಕಾಡಂಚಿನಲ್ಲಿ ನಿಯಮಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇಗಳನ್ನು ಮಾಡಿರುವ ಪರಿಣಾಮ ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚಾಗಿವೆ. ಮಾನವನ ಅತಿಕ್ರಮ ಪ್ರವೇಶದಿಂದ ಪ್ರಾಣಿಗಳು ನಾಡಿನತ್ತ ಮುಖಮಾಡಿ ಜನ ಜಾನುವಾರು ಮೇಲೆ ದಾಳಿ ಮಾಡುತ್ತಿವೆ ಎಂದರು.
ಮಾನವ ಪ್ರಾಣಿ ಸಂಘರ್ಷ ತಡೆಗೆ ಕಾಡಿನೊಳಗೆ ಪ್ರವಾಸೋದ್ಯಮ ಚಟುವಟಿಕೆ ಮಾಡುವ ಬದಲು ಅನ್ನದಾತರ ಹೊಲದಲ್ಲಿ ಕೃಷಿ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯಬೇಕು ಎಂದು ಒತ್ತಾಯಿಸಿದರು.
ಕಾಡಂಚಿನಲ್ಲಿ ರೆಸಾರ್ಟ್ಗಳನ್ನು ತೆರವುಗೊಳಿಸಬೇಕು, ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು, ಮಾನವನ ಹಸ್ತಕ್ಷೇಪ ಕಡಿಮೆಯಾದರೆ ಸಹಜವಾಗಿ ಪ್ರಾಣಿಗಳು ನೆಮ್ಮದಿಯಿಂದ ಬದುಕುತ್ತವೆ. ಅರಣ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆನ್ಲೈನ್ ಗೇಮ್ ನಿಲ್ಲಿಸಿ: ಆನ್ಲೈನ್ ಗೇಮ್ಗಳ ವ್ಯಸನ ಹೆಚ್ಚಾಗುತ್ತಿದ್ದು ಮಕ್ಕಳು ಮಾನಸಿಕವಾಗಿ ದುರ್ಬಲಗೊಳ್ಳುತ್ತಿದ್ದು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆನ್ಲೈನ್ ಜೂಜು ಸಂಪೂರ್ಣಾಗಿ ನಿಂತಿಲ್ಲ, ಕೇಂದ್ರ ಸರ್ಕಾರ ಮಾರಕ ಆನ್ಲೈನ್ ಗೇಮ್ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಸಿ ಕಡ್ಲೆ ಖರೀದಿ ಕೇಂದ್ರ ತೆರೆಯಿರಿ: ಸರ್ಕಾರ ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಹಸಿ ಕಡಲೆ ಖರೀದಿ ಕೇಂದ್ರವನ್ನು ತೆರೆಯಬೇಕು. ದಲ್ಲಾಳಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗೆ ಉತ್ತಮ ದರ ದೊರೆಯುತ್ತಿಲ್ಲ. ಖರೀದಿ ಕೇಂದ್ರಗಳನ್ನು ತೆರೆದರೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿ ದರ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಹಸಿಕಡಲೆಗೆ ₹ 5,875 ಬೆಂಬಲ ಬೆಲೆ ಘೋಷಿಸಿಬೇಕು, ರಾಜ್ಯ ಸರ್ಕಾರವು ಕನಿಷ್ಠ 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.