ADVERTISEMENT

ಚಾಮರಾಜನಗರ: ಕನಿಷ್ಠ ವೇತನ, ಪಿಂಚಣಿಗೆ ಒತ್ತಾಯ

ಅಂಗನವಾಡಿ ನೌಕರರ ಪ್ರತಿಭಟನೆ; ಹೋರಾಟಗಾರರ ವಶ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 1:38 IST
Last Updated 10 ಜುಲೈ 2025, 1:38 IST
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂ‌ದ ಪ್ರತಿಭಟನೆ ನಡೆಸಲಾಯಿತು
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂ‌ದ ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ಕನಿಷ್ಠ ವೇತನ, ಮಾಸಿಕ ₹ 10 ಸಾವಿರ ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂ‌ದ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಎದುರು ‌ಸಮಾವೇಶಗೊಂಡ ಪ್ರತಿಭಟನಾನಿರತರು ಮೆರವಣಿಗೆ ಮೂಲಕ ಭುವನೇಶ್ವರಿ ವೃತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುರೇಶ್ ಹಾಗೂ ತಹಶೀಲ್ದಾರ್ ಗಿರಿಜಾ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ADVERTISEMENT

ಈ ವೇಳೆ ಪ್ರತಿಭಟನೆಯ ಕಾವು ಹೆಚ್ಚಾದಾಗ ಮಧ್ಯೆ ಪ್ರವೇಶಿಸಿದ ಪೊಲೀಸರು ಸಂಘದ ಅಧ್ಯಕ್ಷೆ ಕೆ.ಸುಜಾತಾ, ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ, ಖಜಾಂಚಿ ಭಾಗ್ಯಾ, ಉಪಾಧ್ಯಕ್ಷೆ ಶಾಯೀದಾಬಾನು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಯೋಜನೆಯಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ನೌಕರರ ಜೀವನ ಭದ್ರತೆಯ ದೃಷ್ಟಿಯಿಂದ ಐಸಿಡಿಎಸ್‌ ಯೋಜನೆ ಖಾಯಂ ಮಾಡಬೇಕು. ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ 2023ರ ಏ.1ರಿಂದ ಗ್ರಾಚ್ಯುಟಿ ಪಾವತಿ ಕಾಯ್ದೆ ಅನ್ವಯ ಮಾಡಿ 287 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,204 ಸಹಾಯಕಿಯರಿಗೆ ಗ್ರಾಚ್ಯುಟಿ ಪಾವತಿಸಿರುವುದು ಸ್ವಾಗತಾರ್ಹ. ಇದರ ಲಾಭ 2011ರಿಂದ ನಿವೃತ್ತಿಯಾದ 10,311 ಕಾರ್ಯಕರ್ತೆಯರು, 11,980 ಸಹಾಯಕಿಯರಿಗೂ ದೊರೆಯಬೇಕು ಎಂದು ಆಗ್ರಹಿಸಿದರು.

ಎಫ್‌ಆರ್‌ಎಸ್‌ ಕಡ್ಡಾಯಗೊಳಿಸಬಾರದು, ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರ್ಯಾಕ್ಟರ್‌ನ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ಅನಗತ್ಯ ತೊಂದರೆ ಕೊಡಬಾರದು. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು, ಕಾನೂನು ಕಾಯ್ದೆಗಳಿಗೆ ಹೊಸದಾಗಿ ಸೇರಿಸಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಎ.ನಾಗಮಣಿ ಒತ್ತಾಯಿಸಿದರು.

ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸಬೇಕು, ಫಲಾನುಭವಿಗಳಿಗೆ ನೀಡುವ ಘಟಕ ವೆಚ್ಚ ಹೆಚ್ಚಿಸಬೇಕು, ಅಂಗನವಾಡಿ ನೌಕರರಿಗೆ ₹ 26,000 ಕನಿಷ್ಠ ವೇತನ, ಹತ್ತು ಸಾವಿರ ಪಿಂಚಣಿ ನೀಡಬೇಕು, ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಕೆ.ಸುಜಾತಾ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ನೀಡಬೇಕು. ಖಾಲಿ ಇರುವ ‌ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು, ಬಿಎಲ್‌ಒ ಮತ್ತು ಜನಗಣತಿ ಸೇರಿದಂತೆ ಇತರೆ ಕೆಲಸಗಳಿಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕತಾಯಮ್ಮ, ಪುಷ್ಷಾಲತಾ, ಚಿಕ್ಕನಾಗಮ್ಮ, ನೀಲಾಂಬಿಕೆ, ಚಿಕ್ಕಮಣಿ, ಪುಟ್ಟಮ್ಮ, ಶಾಂತಮ್ಮ, ಮಂಜುಳಾ, ಪುಷ್ಷಲತಾ, ಸೋಮಮ್ಮ, ರಾಣಿ, ವಿಶಾಲಾಕ್ಷಿ, ಶಹಜಾನ್ ಇತರರು ಭಾಗವಹಿಸಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ನೌಕರರನ್ನು ಪೊಲೀಸರು ವಶಕ್ಕೆ ಪಡೆದರು
2011ರಿಂದ ನಿವೃತ್ತಿಯಾದವರಿಗೂ ಗ್ರಾಚ್ಯುಟಿ ಪಾವತಿ: ಒತ್ತಾಯ | ಅಂಗನವಾಡಿಗಳಲ್ಲಿ ಎಲ್‌ಕೆಜಿ ಆರಂಭಿಸಲು ಬೇಡಿಕೆ ಕಾರ್ಯಕರ್ತೆಯರಿಗೆ ಅನಗತ್ಯ ಕಾರ್ಯದೊತ್ತಡ ಬೇಡ

‘ಬಿಎಲ್‌ಒ, ಜನಗಣತಿ ಹೊರೆ ಬೇಡ’

ಕೊಳ್ಳೇಗಾಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು. ನಗರದ ಮರಡಿಗುಡ್ಡದ ಮುಂಭಾಗದಲ್ಲಿ ಸಮಾವೇಶಗೊಂಡ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಘೋಷಣೆ ಕೂಗಿದರು. ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್ 2 ತಹಶೀಲ್ದಾರ್ ಬಿ.ವಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷೆ ಉಮಾದೇವಿ ಮಾತನಾಡಿ, ಎಫ್‌ಆರ್‌ಎಸ್ ಅನ್ನು ಕಡ್ಡಾಯ ಮಾಡಬಾರದು, ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರ್ಯಾಕ್ಟರ್‌ನ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ತೊಂದರೆ ಕೊಡಬಾರದು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು, 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಐಸಿಡಿಎಸ್ ಯೋಜನೆಯ ಬಜೆಟ್‌ ಹೆಚ್ಚಿಸಬೇಕು, ಫಲಾನುಭವಿಗಳಿಗೆ ಕೊಡುವ ಘಟಕ ವೆಚ್ಚ ಹೆಚ್ಚಿಸಬೇಕು, ₹25 ಸಾವಿರ ಕನಿಷ್ಠ ವೇತನ, ₹10 ಸಾವಿರ ಮಾಸಿಕ ಪಿಂಚಣಿ ಕೊಡಬೇಕು, ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು ಹಾಗೂ ಬಿಎಲ್ಒ ಮತ್ತು ಜನಗಣತಿ ಮುಂತಾದ ಕೆಲಸಗಳಿಗೆ ನೇಮಿಸಬಾರದು ಎಂಬ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದರು. ಈ ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಉಪಾಧ್ಯಕ್ಷೆ ಮರಿಯಮ್ಮ ಕಾರ್ಯದರ್ಶಿ ಶಾಂತಮ್ಮ ಸಹಕಾರ್ಯದರ್ಶಿ ಜಿ.ಶೋಭ, ಸವಿತ, ನಳಿನಿ, ವಿಜಯ, ಸುನೀತ, ಜಯಮ್ಮ, ಲತಾ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.