ADVERTISEMENT

ಬಂಡೀಪುರ: 'ರಾಣಾ' ಸ್ಥಾನಕ್ಕೆ ಮುಧೋಳ ನಾಯಿಗಳು?

ಮರಿಗಳಿಗಾಗಿ ಹುಡುಕಾಟ ಆರಂಭಿಸಿರುವ ಅಧಿಕಾರಿಗಳು

ಮಲ್ಲೇಶ ಎಂ.
Published 12 ಅಕ್ಟೋಬರ್ 2020, 2:19 IST
Last Updated 12 ಅಕ್ಟೋಬರ್ 2020, 2:19 IST
ಮುಧೋಳ ತಳಿ ನಾಯಿ, ಸಾಂದರ್ಭಿಕ ಚಿತ್ರ
ಮುಧೋಳ ತಳಿ ನಾಯಿ, ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ಅರಣ್ಯ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದವರನ್ನು ಪತ್ತೆಹಚ್ಚಿ ಸುದ್ದಿ ಮಾಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಶ್ವಾನ ರಾಣಾನ ನಿವೃತ್ತಿ ನಂತರ, ಅದರ ಜಾಗದಲ್ಲಿ ಮುಧೋಳ ತಳಿಯ ನಾಯಿಗಳನ್ನು ನಿಯೋಜಿಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ದೇಸಿ ಮತ್ತು ಕರ್ನಾಟಕದ್ದೇ ಆದ ಮುಧೋಳ ತಳಿಯ ಶ್ವಾನ ಚುರುಕಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಸುದ್ದಿ ಮಾಡಿತ್ತು.

ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ಮುಧೋಳ ತಳಿಯ ಶ್ವಾನವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವ ಅಧಿಕಾರಿಗಳು, ಒಂದು ಗಂಡು ಮತ್ತು ಹೆಣ್ಣು ಶ್ವಾನ ಮರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ADVERTISEMENT

ಬಂಡೀಪುರ, ನಾಗರಹೊಳೆ ಹಾಗೂ ತಮಿಳುನಾಡಿನ ಮಧುಮಲೆ ಅರಣ್ಯದಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ರಾಣಾ ಯಶಸ್ವಿಯಾಗಿತ್ತು. ಅದರ ನಿವೃತ್ತಿಯ ನಂತರ ಅದರಷ್ಟೇ ಸಾಮರ್ಥ್ಯದ ಶ್ವಾನಗಳ ಅಗತ್ಯವಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಮುಧೋಳ ಭಾಗದಲ್ಲಿ ಇರುವ ಅರಣ್ಯಾಧಿಕಾರಿಗಳಿಗೆ ಶ್ವಾನ ಹುಡುಕುವುದಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಸೂಚಿಸಿದ್ದಾರೆ.

‘ಕೆಲವರು ಮುಧೋಳ ತಳಿ ಎಂದು ಬೇರೆ ತಳಿಯ ಶ್ವಾನ ನೀಡಿ ಮೋಸ ಮಾಡುವವರು ಇದ್ದಾರೆ. ಅದಕ್ಕಾಗಿ ಅಲ್ಲಿನ ಅರಣ್ಯಾಧಿಕಾರಿಗಳಿಗೆ ಎರಡು ಶ್ವಾನಕ್ಕೆ ಶೋಧ ನಡೆಸಲು ತಿಳಿಸಿದ್ದೇನೆ’ ಎಂದು ಬಾಲಚಂದ್ರ ತಿಳಿಸಿದರು.

‘ಮಿಲಿಟರಿ ಸೇವೆ, ಬಾಂಬ್ ಪತ್ತೆ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಪೊಲೀಸ್ ಹಾಗು ರಕ್ಷಣಾ ಪಡೆಗಳು ಮುಧೋಳ ತಳಿಯ ಶ್ವಾನಗಳ ನೆರವು ಪಡೆದಿದ್ದಾರೆ. ಅದರಂತೆ ಅರಣ್ಯ ಸಂರಕ್ಷಣೆಗೂ ಅವುಗಳೇ ಸೂಕ್ತ ಎನಿಸಿ ತಳಿಯ ಶ್ವಾನದ ಮರಿಗಳನ್ನು ಹುಡುಕಲು ತಿಳಿಸಿದ್ದೇನೆ’ ಎಂದರು.

‘ರಾಣಾ ಸದ್ಯ ಸಮರ್ಥವಾಗಿದೆ. ಆದರೆ, ಸರ್ಕಾರಿ ನೌಕರರಂತೆ ಅದಕ್ಕೂ ನಿವೃತ್ತಿ ಇದೆ. ಅದು ಬಲಿಷ್ಠವಾಗಿ ಇರುವಾಗಲೇ ಮೂದೋಳ ತಳಿ ಶ್ವಾನಗಳಿಗೆ ತರಬೇತಿ ನೀಡಿ ಕಾರ್ಯಾಚರಣೆಗೆ ತಯಾರು ಮಾಡಲು ಚಿಂತಿಸಲಾಗಿದೆ. ಇಲಾಖೆಯ ಗಮನಕ್ಕೆ ತಂದು ಶ್ವಾನದ ಮರಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.