ಚಾಮರಾಜನಗರ: ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಬಜೆಟ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರು, ಜನಸಾಮಾನ್ಯರು ಸ್ವಾಗತಿಸಿದ್ದರೆ, ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳು ಸ್ವಾಗತಿಸಿದ್ದಾರೆ. ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ₹1 ಸುಂಕ ಹೇರಿರುವುದನ್ನು ವಾಹನ ಮಾಲೀಕರು ವಿರೋಧಿಸಿದ್ದಾರೆ.
ಈ ಬಜೆಟ್ನಲ್ಲಿ ಗ್ರಾಮೀಣ ಭಾಗಕ್ಕೆ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯವನ್ನು ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಶೂನ್ಯ ಬಂಡವಾಳ ಕೃಷಿ ಮಾದರಿಯನ್ನು ಪ್ರಸ್ತಾಪಿಸಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.
‘ಶೂನ್ಯ ಬಂಡವಾಳ ಕೃಷಿಯನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಇದು ರೈತರಿಗೆ ವರದಾನವಾಗಲಿದೆ. ಶೂನ್ಯ ಬಂಡವಾಳ ಕೃಷಿ ಪದ್ಧತಿ ಪರಿಸರಕ್ಕೆ ಪೂರಕವಾಗಿದೆ.ಜಲ ಸಂರಕ್ಷಣೆಯ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿರುವುದು ಸಂತೋಷ. ಅದಕ್ಕಾಗಿ ಪ್ರತ್ಯೇಕ ಸಚಿವಾಲಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನೂ ಬಜೆಟ್ನಲ್ಲಿ ಮಾಡಲಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಾರ್ಷಿಕವಾಗಿ ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿಯನ್ನು ನೀಡಿರುವುದು ಉದ್ಯೋಗಿಗಳಲ್ಲಿ ಉತ್ಸಾಹ ಮೂಡಿಸಿದೆ.ಚಿನ್ನ ಸೇರಿದಂತೆ ಬೆಲೆ ಬಾಳುವ ಲೋಹಗಳ ಬೆಲೆ ಹೆಚ್ಚಾಗಿರುವುದು ಆಭರಣ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಮೊಬೈಲ್ ಫೋನ್, ಸ್ಮಾರ್ಟ್ಫೋನ್, ಕಾರು, ಸೆಟ್ಆಪ್ ಬಾಕ್ಸ್, ಸೌರ ಫಲಕ, ಚರ್ಮದ ಉತ್ಪನ್ನಗಳು, ಇಟ್ಟಿಗೆ, ಎಲೆಕ್ಟ್ರಿಕ್ ವಾಹನಗಳು, ಗೃಹ ಉಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಲಿರುವುದು ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ.
ವರ್ತಕರಿಗೆ ಬೇಸರ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ₹1 ಸುಂಕ ಹೇರುವ ನಿರ್ಧಾರ ವರ್ತಕರಲ್ಲಿ ಕೊಂಚ ಬೇಸರ ಮೂಡಿಸಿದೆ. ಜಿಎಸ್ಟಿ ಕಡಿತ ಮಾಡದಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಡಿಸಿದ್ದಾರೆ.
‘ಒಟ್ಟಾರೆಯಾಗಿ ಇದೊಂದು ಉತ್ತಮ ಬಜೆಟ್ ಆದರೂ, ಇಂಧನದ ಮೇಲಿನ ಸುಂಕ ಹೆಚ್ಚಿರುವುದರಿಂದ ಸರಕುಗಳ ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ವರ್ತಕರಿಗೆ ನಷ್ಟವಾಗುತ್ತದೆ. ಹಲವು ವಸ್ತುಗಳ ಮೇಲಿನ ಜಿಎಸ್ಟಿ ದರ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ. ರೈತರಿಗೆ ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಿದಂತೆ ಕಾಣುತ್ತಿದೆ’ ಎಂದು ಚಾಮರಾಜನಗರ ವರ್ತಕರ ಸಂಘದ ಅಧ್ಯಕ್ಷ ಸಿ.ವಿ.ಶ್ರೀನಿವಾಸ್ ಅವರು ಹೇಳಿದರು.
ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿರುವುದು, ಬಡವರಿಗೆ ಮನೆ ಕಟ್ಟಿಸಲು ಯೋಜನೆ ಹಮ್ಮಿಕೊಂಡಿರುವುದು, ₹45 ಲಕ್ಷದವರೆಗಿನ ಗೃಹ ಸಾಲಕ್ಕೆ ₹1.5 ಲಕ್ಷ ತೆರಿಗೆ ವಿನಾಯಿತಿ, ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದನ್ನು ಜನರು ಸ್ವಾಗತಿಸಿದ್ದಾರೆ.
ಗಣ್ಯರು ಏನಂತಾರೆ?
ಅಭಿವೃದ್ಧಿಗೆ ಪೂರಕ
ಇದೊಂದು ಅತ್ಯುತ್ತಮ ಬಜೆಟ್. ಎಲ್ಲ ವರ್ಗದವರಿಗೂ ಸೌಲಭ್ಯ ಸಿಗುವಂತೆ ಮಾಡಲಾಗಿದೆ. ರೈತರಿಗೆ, ಜನಸಾಮಾನ್ಯರಿಗೆ ಅನೇಕ ಅವಕಾಶವಿದೆ. ಮನೆ ಬಡವರಿಗೆ ಮನೆ ಸಿಗುವ ಯೋಜನೆ, ರಸ್ತೆಯ ಅಭಿವೃದ್ಧಿ ಒಳಗೊಂಡಿದೆ ಯಾವುದನ್ನು ಕಡೆಗಣಿಸಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಮೋದಿ ಸರ್ಕಾರ ಮಂಡಿಸಿದೆ.
–ಸಿ.ಎಸ್.ನಿರಂಜನಕುಮಾರ್. ಶಾಸಕ ಗುಂಡ್ಲುಪೇಟೆ
**
ನಿರೀಕ್ಷೆ ಹುಸಿಯಾಗಿದೆ
ಕೇಂದ್ರದ ಬಜೆಟ್ ಬಗ್ಗೆ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರ ನಿರೀಕ್ಷೆಗಳು ಹುಸಿಯಾಗಿವೆ. ರೈತರಿಗೆ, ಬಡವರ ಪರವಾದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿಲ್ಲ. ಶಿಕ್ಷಣಕ್ಕೂ ಆದ್ಯತೆ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ, ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಆ ಮೂಲಕ ಸಾಮಾನ್ಯ ಜನರ ಮೇಲೆ ಇನ್ನಷ್ಟು ಹೊರೆ ಹಾಕಲಾಗಿದೆ.
–ಆರ್.ಧ್ರುವನಾರಾಯಣ, ಕಾಂಗ್ರೆಸ್ ಮುಖಂಡ
**
ರೈತರಿಗೆ ಅನುಕೂಲ
ಜಲ ಸಂರಕ್ಷಣೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿರುವುದು, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ಕೊಟ್ಟಿರುವುದು ಶ್ಲಾಘನೀಯ. ಇದರಿಂದಾಗಿ ರೈತರಿಗೆ ಅನುಕೂಲವಾಗಲಿದೆ. ಶೂನ್ಯ ಬಂಡವಾಳ ಕೃಷಿಯಿಂದ ಭೂಮಿಯ ಆರೋಗ್ಯ ಹೆಚ್ಚಲಿದೆ. ಜನರಿಗೆ ವಿಷಮುಕ್ತ ಆಹಾರ ಸಿಗಲಿದೆ.
–ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
**
ವರ್ತಕರಿಗೆ ಹೊರೆ
ರೈತರಿಗೆ, ಗ್ರಾಮೀಣ ಜನರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾದಂತಹ ಬಜೆಟ್. ಪೆಟ್ರೋಲ್, ಡೀಸೆಲ್ ಮೇಲೆ ₹1 ಸುಂಕ ವಿಧಿಸಿರುವುದು ವ್ಯಾಪಾರಿಗಳಿಗೆ ಸ್ವಲ್ಪ ಹೊರೆಯಾಗಿದೆ. ಕೆಲವು ವಸ್ತುಗಳ ಮೇಲೆ ಜಿಎಸ್ಟಿಯನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕಿತ್ತು.
–ಶ್ರೀನಿವಾಸ, ಚಾಮರಾಜನಗರ ವರ್ತಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.