ADVERTISEMENT

ಚಾಮರಾಜನಗರ: ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೆ ಕರ್ತವ್ಯ

ಗಾಂಧಿವಾದಿ ಸಿ.ರಂಗಸ್ವಾಮಿ ಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:10 IST
Last Updated 24 ಆಗಸ್ಟ್ 2025, 4:10 IST
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಿ.ರಂಗಸ್ವಾಮಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಿ.ರಂಗಸ್ವಾಮಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಪ್ರಜ್ಞಾವಂತ ಸಮಾಜದ ಆದ್ಯ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷ ಎಸ್.ಸುರೇಶ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ
ಅಂಗವಾಗಿ ಆಯೋಜಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಸಿ. ರಂಗಸ್ವಾಮಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಅನುಯಾಯಿಯಾಗಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಂಗಸ್ವಾಮಿ ‌ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚುವಲ್ಲಿ ಹಾಗೂ ಜನರಲ್ಲಿ ಚಳವಳಿಗಳನ್ನು ಪ್ರೇರೇಪಿಸುಲು ಅಪಾರ ಶ್ರಮವಹಿಸಿದ್ದಾರೆ ಎಂದರು.

ಪ್ರತಿಯೊಬ್ಬರಲ್ಲೂ ದೇಶಪ್ರೇಮ ಜಾಗೃತಗೊಳ್ಳಬೇಕು, ದೇಶದ ಉಳಿವಿಗೆ ಹಾಗೂ ಆರ್ಥಿಕತೆಯ ಸದೃಢತೆಗೆ ವಿದೇಶಿ ವಸ್ತುಗಳ ಬಳಕೆಯನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಚೂಡಾ ಅಧ್ಯಕ್ಷ ಮಹಮ್ಮದ್‌ ಅಸ್ಕರ್ ಮಾತನಾಡಿ, ಮಹನೀಯರ ತ್ಯಾಗ ಹಾಗೂ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ದಕ್ಕಿರುವ ಸ್ವಾತಂತ್ರ್ಯದಿಂದ ಎಲ್ಲರೂ ಸುಖವಾಗಿ ಬದುಕುತ್ತಿದ್ದು ತ್ಯಾಗ ಬಲಿದಾನ ಮಾಡದಿ ಹೋರಾಟಗಾರರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶೈಲೇಶ್‌ ಕುಮಾ‌ರ್ ಮಾತನಾಡಿ, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ದೇಶವನ್ನು ಆಕ್ರಮಿಸಿಕೊಂಡು ಭಾರತಿಯರ ಮೇಲೆ ಸವಾರಿ ಮಾಡಿ, ದೌರ್ಜನ್ಯ ಎಸಗಿ, ದೇಶ ಕೊಳ್ಳೆ ಹೊಡೆದರು. ಬ್ರಿಟಿಷರ ವಿರುದ್ಧ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಕ್ವಿಟ್ ಇಂಡಿಯಾ ಚಳವಳಿ ಬ್ರಿಟಿಷರಿಗೆ ಕೊಟ್ಟ ಶಾಪವಾಗಿದ್ದು, ಮಾಡು ಇಲ್ಲವೆ ಮಡಿ ಭಾರತೀಯರಿಗೆ ಕೊಟ್ಟ ಮಂತ್ರವಾಗಿದೆ ಎಂದರು.

ಚಿಂತಕ ಸುರೇಶ್‌ ಎನ್‌.ರುಗ್ವೇದಿ ಮಾತನಾಡಿ, ಪ್ರತಿಯೊಬ್ಬರು ವರ್ಷದಲ್ಲಿ ಎರಡು ದಿನವಾದರೂ ಖಾದಿ ಬಟ್ಟೆ ತೊಡುವ ಸಂಕಲ್ಪ ಮಾಡಬೇಕು. ರಾಷ್ಟ್ರೀಯ ಹೆಮ್ಮೆಯಾಗಿರುವ, ದೇಶಪ್ರೇಮ ಜಾಗೃತಗೊಳಿಸುವ ಖಾದಿಯನ್ನು ಗೌರವಿಸಬೇಕು. ಖಾದಿ ಹಾಗೂ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಬಲಿದಾನ ಮಾಡಿದ್ದಾರೆ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಶ್ರೀನಿಧಿ ಕುದರ್
ಮಾತನಾಡಿದರು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಎಸ್‌.ಜಿ.ಮಹಾಲಿಂಗಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕಿ ಸುಶೀಲಾ, ಆಶ್ರಯ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಗಣೇಶ್‌ ದೀಕ್ಷಿತ್, ಮುಖಂಡರಾದ ಚಾ.ವೆಂ.ರಾಜ್‌ಗೋಪಾಲ್, ಮಹಾಸಭಾದ ಪಣ್ಯದಹುಂಡಿ ರಾಜು, ಮಹೇಶಗೌಡ, ಅರುಣ್‌ಕುಮಾರ್‌ ಗೌಡ, ಲೋಕೇಶ್ ಹೊಮ್ಮ, ಮುತ್ತಿಗೆ ಗೋವಿಂದರಾಜು, ನಂಜುಂಡಸ್ವಾಮಿ, ಮುತ್ತುರಾಜ, ಆಟೋ ಲಿಂಗರಾಜು, ಚನ್ನಶೆಟ್ಟಿ ಇದ್ದರು.

Highlights - ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ ‘ಹೋರಾಟಗಳ ಫಲವಾಗಿ ದಕ್ಕಿದ ಸ್ವಾತಂತ್ರ್ಯ’ ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ ರಂಗಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.