ADVERTISEMENT

ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದ ಹೈಕೋರ್ಟ್‌ ಸಿಜೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 13:58 IST
Last Updated 18 ಜೂನ್ 2022, 13:58 IST
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಶನಿವಾರ ಪತ್ನಿ ಸಮೇತರಾಗಿ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯದ ಸಂಪ್ರದಾಯದಂತೆ ಅವರನ್ನು ಗೌರವಿಸಲಾಯಿತು
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಶನಿವಾರ ಪತ್ನಿ ಸಮೇತರಾಗಿ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯದ ಸಂಪ್ರದಾಯದಂತೆ ಅವರನ್ನು ಗೌರವಿಸಲಾಯಿತು   

ಯಳಂದೂರು/ಚಾಮರಾಜನಗರ: ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಕುಟುಂಬ ಸಮೇತರಾಗಿ ಶನಿವಾರ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದರು.

ಎರಡು ದಿನಗಳ ಅವಧಿಗೆ ಖಾಸಗಿ ಭೇಟಿಗಾಗಿ ಜಿಲ್ಲೆಗೆ ಬಂದಿರುವ ನ್ಯಾಯಮೂರ್ತಿ ಅವರು ಮಧ್ಯಾಹ್ನ ಬಿಳಿಗಿರಿರಂಗನಬೆಟ್ಟ ತಲುಪಿದರು. ದೇವಾಲಯದ ಆಡಳಿತದ ಮಂಡಳಿಯ ಸದಸ್ಯರು ನ್ಯಾಯಮೂರ್ತಿ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನ್ಯಾಯಮೂರ್ತಿ ಅವರು ಪತ್ನಿ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಫಲ ತಾಂಬೂಲ ನೀಡಿ ಅವರನ್ನು ಗೌರವಿಸಲಾಯಿತು.

ಅಲ್ಲಿಂದ ನೇರವಾಗಿ ಚಾಮರಾಜನಗರಕ್ಕೆ ಬಂದ ಅವಸ್ಥಿ ಅವರು, ಉದ್ಯಮಿ ವಿಜಯ್‌ಕುಮಾರ್‌ ಅವರ ಮನೆಗೆ ತೆರಳಿ ಕೆಲ ಹೊತ್ತು ವಿಶ್ರಾಂತಿ ಪಡೆದರು. ನಂತರ ವಾಸ್ತವ್ಯಕ್ಕಾಗಿ ಬಂಡೀಪುರಕ್ಕೆ ತೆರಳಿದರು.

ADVERTISEMENT

ಭಾನುವಾರ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ಕುಮಾರ್, ಅರ್ಚಕ ರವಿಕುಮಾರ್, ರಾಜು, ಶೇಷಾದ್ರಿ ಹಾಗೂ ದೇವಾಲಯ ಆಡಳಿತ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.