ADVERTISEMENT

ರೈತರಿಗೆ ವಿಷವುಣಿಸುವ ಕಾಂಗ್ರೆಸ್ ಸರ್ಕಾರ: ಆರ್.ಆಶೋಕ್ ವಾಗ್ದಾಳಿ

ಗುಂಡ್ಲುಪೇಟೆ ತಾಲ್ಲೂಕಿನ ಕೆರೆ ತುಂಬಿಸಲು ಒತ್ತಾಯಿಸಿ ಬಿಜೆಪಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:23 IST
Last Updated 6 ನವೆಂಬರ್ 2025, 5:23 IST
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕೆರೆ ನೀರಿಗಾಗಿ ಕಾಲ್ನಡಿಗೆ ಪಾದಯಾತ್ರೆ ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಉದ್ಘಾಟಿಸಿದರು
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕೆರೆ ನೀರಿಗಾಗಿ ಕಾಲ್ನಡಿಗೆ ಪಾದಯಾತ್ರೆ ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಉದ್ಘಾಟಿಸಿದರು   

ಗುಂಡ್ಲುಪೇಟೆ: ಸಂಪೂರ್ಣ ಮಳೆಯಾಶ್ರಿತ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಕೆರೆನೀರಿಗಾಗಿ ಕಾಲ್ನಡಿಗೆ ಪಾದಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಅನ್ನದಾತರ ಪಾಲಿಗೆ ವಿಷವಾಗಿದೆ. ಸರ್ಕಾರದ ಧೋರಣೆ ಖಂಡಿಸಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಕ್ತಿ ಯೋಜನೆ ಜಾರಿಗೆ ತಂದು ಉಚಿತವಾಗಿ ಮಹಿಳೆಯರನ್ನು ಬಸ್ ಹತ್ತಿಸಿದ್ದೇವೆ ಎಂದು ಹೇಳುವ ಸರ್ಕಾರ ಕೆರೆಗಳಿಗೆ ನೀರು ತುಂಬಿಸದೆ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಾರ್, ವೈನ್‌ಸ್ಟೋರ್‌ಗಳಿಗೆ ಪರವಾನಗಿ ನೀಡುವುದು ಹೆಚ್ಚಾಗಿದೆಯೇ ಹೊರತು ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಕೆರೆಗಳಿಗೆ ನೀರು ತುಂಬಿಸುವಲ್ಲಿ ಶಾಸಕರು, ಅಧಿಕಾರಿಗಳು ಮತ್ತು ಸರ್ಕಾರ ವಿಫಲವಾಗಿದೆ. ಮೋಟರ್ ದುರಸ್ತಿ ನೆಪವೊಡ್ಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಸರ್ಕಾರದ ಬಳಿ ದುರಸ್ತಿಗೆ ₹ 2 ಕೋಟಿ ಹಣ ಇಲ್ಲವೇ’ ಎಂದು ಪ್ರಶ್ನಿಸಿದ ಅಶೋಕ್, ‘ ನೀರು ತುಂಬಿಸದೆ ನುಣುಚಿಕೊಂಡರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕೋಣ’ ಎಂದರು.

‘ಬಂಡೀಪುರದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರದ ಇಲಾಖೆಗಳು ಪ್ರಗತಿ ಸಾಧಿಸಿಲ್ಲ. ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ₹25 ಲಕ್ಷ ಪರಿಹಾರ ಕೊಡುವ ಸರ್ಕರ ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಕಣ್ಣು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದ್ದು, ಜನರಲ್ ವಾರ್ಡ್‌ಗೆ ಬರುವವರೆಗೂ ಜನರ ಕೂಗು ಕೇಳುವುದಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರ ಆಡಳಿತ  ಇದ್ದಿದ್ದರೆ ರೈತರು ಕೇಳುವ ಮುನ್ನವೇ ಕರೆಗಳನ್ನು ತುಂಬಿಸುತ್ತಿದ್ದರು’ ಎಂದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಕೆರೆಗಳಿಗೆ ನೀರು ತುಂಬಿಸುವಂತೆ ಹೋರಾಟ ಮಾಡುತ್ತಿರುವುದು ವಿಪರ್ಯಾಸ. ಸರ್ಕಾರವೇ ಆದ್ಯತೆ ಮೇಲೆ ಕೆರೆಗಳಿಗೆ ನೀರು ತುಂಬಿಸಬೇಕಿತ್ತು. 2028ರ ಚುನಾವಣೆಯಲ್ಲಿ ಕಮಲ ಅರಳಿಸಿದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದರು.

ಸರಗೂರು, ಗುಂಡ್ಲುಪೇಟೆ ಭಾಗದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದ್ದು, ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಗಮನ ಹರಿಸಬೇಕು. ರೈತರು ಪ್ರಕೃತಿಗೆ ಪೂರಕವಾಗಿ ವನ್ಯಜೀವಿಗಳೊಟ್ಟಿಗೆ ಬದುಕುತ್ತಿದ್ದು ,ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎನ್.ಮಹೇಶ್, ಬಾಲರಾಜು, ನಾಗೇಂದ್ರ, ಹರ್ಷವರ್ಧನ್, ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಮುಖಂಡರಾದ ಎಲ್.ಸುರೇಶ್, ನೂರೊಂದು ಶೆಟ್ಟಿ ರಾಮಚಂದ್ರು, ಎನ್.ಮಲ್ಲೇಶ್, ನಗರಸಭಾ ಅಧ್ಯಕ್ಷ ಸುರೇಶ್ ನಾಯಕ, ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ್, ಪ್ರಣಯ್, ಸುನೀಲ್ ಮೂಡ್ಲು, ನಮೋ ಮಂಜು, ಸುರೇಶ್ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

‘ಕೆರೆ ತುಂಬಿಸಲು ಕಾಂಗ್ರೆಸ್ ವಿಫಲ’

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಕೆರೆಗಳಿಗೆ ನೀರು ತುಂಬಿಸಲು ವಿಫಲವಾಗಿದೆ. ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಕೆರೆಗೆ ನೀರು ತುಂಬಿಸಲಾಗುತ್ತಿತ್ತು ಕಾಂಗ್ರೆಸ್ ಬಂದು ಎರಡೂವರೆ ವರ್ಷ ಕಳೆದರೂ ನೀರು ಬಿಟ್ಟಿಲ್ಲ.  ಇದರಿಂದ ಕಾಂಗ್ರೆಸ್‌ಗೆ ರೈತರ ಮೇಲೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ವಾಗ್ದಾಳಿ ನಡೆಸಿದರು

‘ಬಿಜೆಪಿ ಅವಧಿಯಲ್ಲಿ ಸಮೃದ್ಧ ನೀರು’

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸಲು ₹ 212 ಕೋಟಿ ಅನುದಾನ ನೀಡಿದ್ದರು. 2019ರಿಂದ ಸತತವಾಗಿ ಕೆರೆಗಳು ತುಂಬುತ್ತಾ ಬಂದಿದ್ದವು. ಆದರೆ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದ ಬಳಿಕ ಕೆರೆಗಳನ್ನು ತುಂಬಿಸುತ್ತಿಲ್ಲ. ಸ್ಥಳೀಯ ಶಾಸಕ ಗಣೇಶ ಪ್ರಸಾದ್ ಅವರಷ್ಟು ಬುದ್ಧಿವಂತ ನಾನಲ್ಲ. ಇಲ್ಲಿನ ಮತದಾರರು ಹಾಲಿ ಶಾಸಕರ ತಂದೆಯನ್ನು ಐದು ಬಾರಿ ತಾಯಿಯನ್ನು ಒಮ್ಮೆ ಗೆಲ್ಲಿಸಿದ್ದಾರೆ. ತಂದೆ–ತಾಯಿ ಕೋಟಾದಲ್ಲಿ ಗಣೇಶ್ ಪ್ರಸಾದ್ ಕೂಡ ಗೆದ್ದಿದ್ದಾರೆ. ಶಾಸಕರಿಗೆ ರಾಜಕಾರಣ ಕ್ವಾರಿ ವ್ಯವಹಾರ ಮಾಡಲು ಗುಂಡ್ಲುಪೇಟೆ ಬೇಕು ವಾಸ ಮಾಡಲು ಮಾತ್ರ ಮೈಸೂರು ಬೇಕು’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.