ADVERTISEMENT

ಹಾಡಿಗಳಿಗೆ ಡಿ.ಸಿ ಭೇಟಿ: ಮೂಲ ಸೌಕರ್ಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 15:46 IST
Last Updated 2 ಫೆಬ್ರುವರಿ 2021, 15:46 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬೇಡಗುಳಿ ಹಾಗೂ ಸುತ್ತುಮುತ್ತಲಿನ ಪೋಡುಗಳಿಗೆ ಭೇಟಿ ನೀಡಿ ಸೋಲಿಗರ ಅಹವಾಲುಗಳನ್ನು ಸ್ವೀಕರಿಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬೇಡಗುಳಿ ಹಾಗೂ ಸುತ್ತುಮುತ್ತಲಿನ ಪೋಡುಗಳಿಗೆ ಭೇಟಿ ನೀಡಿ ಸೋಲಿಗರ ಅಹವಾಲುಗಳನ್ನು ಸ್ವೀಕರಿಸಿದರು   

ಚಾಮರಾಜನಗರ: ತಾಲ್ಲೂಕಿನ ಅರಣ್ಯದಲ್ಲಿರುವ ಗಿರಿಜನರ ವಿವಿಧ ಹಾಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೇಡಗುಳಿ, ಮಾರಿಗುಡಿ, ಕಾಡಿಗೆರೆ, ಬಿಸಿಲಗೆರೆ ಪೋಡುಗಳಿಗೆ ಭೇಟಿ ಕೊಟ್ಟು ಸೋಲಿಗರ ಕುಂದುಕೊರತೆ ವಿಚಾರಿಸಿದರು. ಪೋಡುಗಳಿಗೆ ಕಲ್ಪಿಸಲಾಗಿರುವ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಪರಿಶೀಲನೆ ಮಾಡಿದರು.

ಸೋಲಿಗರಿಗೆ ನೀಡಿರುವ ಪೌಷ್ಟಿಕ ಆಹಾರವನ್ನು ವೀಕ್ಷಿಸಿದರು. ಪಡಿತರ ವಿತರಣೆ ಸರಿಯಾದ ಸಮಯಕ್ಕೆ ಆಗುತ್ತಿದೆಯೇ ಎಂದು ಗಿರಿಜನರನ್ನು ಪ್ರಶ್ನಿಸಿದರು. ಆಹಾರವನ್ನು ಸದ್ಬಳಕೆ ಮಾಡಿಕೊಳ್ಳುವಂತೆಯೂ ಸಲಹೆ ನೀಡಿದರು.

ADVERTISEMENT

ಮನೆಗಳ ಸಮೀಕ್ಷೆಗೆ ಸೂಚನೆ:40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕೆಲವು ಮನೆಗಳು ಶಿಥಿಲವಾಗಿರುವುದನ್ನು ಗಮನಿಸಿದ ರವಿ ಅವರು, ಮನೆಗಳ ಸಮೀಕ್ಷೆ ಕೈಗೊಂಡು ಎಷ್ಟು ಮನೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದೆ ಎಂಬ ಬಗ್ಗೆ ಕ್ರಿಯಾಯೋಜನೆ ಸಿದ್ಧ ಪಡಿಸಿ ಅಂದಾಜು ಪ್ರಸ್ತಾವ ಸಲ್ಲಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹೊನ್ನೇಗೌಡ ಅವರಿಗೆ ಸೂಚಿಸಿದರು.

:ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ ಕೆಲವರಿಗೆ ತಡವಾಗಿ ತಲುಪುತ್ತಿದೆ. ಇನ್ನು ಕೆಲವರಿಗೆ ಸೌಲಭ್ಯ ದೊರಕಬೇಕಿದೆ. ಪಡಿತರ ವಿತರಣೆ ವ್ಯವಸ್ಥೆಯು ಇನ್ನಷ್ಟು ಅನುಕೂಲವಾಗಬೇಕಿದೆ' ಎಂದು ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಕೂಡಲೇ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾರಿಗುಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ವೈದ್ಯರನ್ನು ನೇಮಿಸುವಂತೆ ನಿವಾಸಿಗಳು ಒತ್ತಾಯಿಸಿದರು.

ಬೇಡಗುಳಿ ಆಶ್ರಮ ಶಾಲೆಗೆ ಭೇಡಿ ನೀಡಿ ಮಕ್ಕಳ ದಾಖಲಾತಿ ವಿವರಗಳನ್ನು ಪರಿಶೀಲಿಸಿದರು. ‘ಅಲ್ಲಿನ ಶಿಕ್ಷಣ ಸೌಲಭ್ಯಗಳಿಗೆ ಅನುಸಾರವಾಗಿ ಮಕ್ಕಳ ಪ್ರವೇಶ ದಾಖಲಾತಿಯನ್ನು ಹೆಚ್ಚಳ ಮಾಡಬೇಕು. ಶಾಲೆಯಿಂದ ಯಾರು ಹೊರಗುಳಿಯಬಾರದು. ಶಿಕ್ಷಣ ವಂಚಿತರಾಗದಂತೆ ಮಕ್ಕಳನ್ನು ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಬಿಆರ್‌ಟಿಯಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಮುಖಂಡರಾದ ಸಿ.ಮಾದೇಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.