ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ, ಗುಂಡ್ರೆ ವಲಯದ ಆನೆ ತಡೆ ಕಂದಕದಲ್ಲಿನ ಪೊದೆಯೊಂದರಲ್ಲಿ ಮಂಗಳವಾರ ಗಂಡು ಹುಲಿಯ ಮೃತ ದೇಹ ಪತ್ತೆಯಾಗಿದೆ.
‘5ರಿಂದ 6 ವರ್ಷ ಪ್ರಾಯದ ಹುಲಿಯ ಮೃತ ದೇಹ ಪರಿಶೀಲಿಸಿದಾಗ, ಮೂರ್ನಾಲ್ಕು ದಿನದ ಹಿಂದೆ ಮುಳ್ಳು ಹಂದಿಯನ್ನು ಬೇಟೆಯಾಡಲು ಯತ್ನಿಸಿದೆ. ಕಾದಾಟದಲ್ಲಿ ಹುಲಿಯ ಮುಂಗಾಲಿಗೆ ಹಂದಿಯ ಮುಳ್ಳುಗಳು ಚುಚ್ಚಿಕೊಂಡಿವೆ. ನಂತರ ಸಣ್ಣ-ಪುಟ್ಟ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಲು ಕಂದಕದ ಪೊದೆಯೊಂದರಲ್ಲಿ ಪ್ರಯತ್ನಿಸುತ್ತಿದ್ದಾಗ, ಹುರುಳಿಗೆ ಸಿಲುಕಿ ಒದ್ದಾಡಿದೆ. ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಮಾಹಿತಿ ನೀಡಿದ್ದಾರೆ.
ಗುಂಡ್ರೆ ವಲಯದಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ರಾಣ ಸೇರಿದಂತೆ ಇಲಾಖೆಯ ಇನ್ನಿತರೆ ಶ್ವಾನ ಕರೆಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೃತ ಹುಲಿಯ ವಿವಿಧ ಅಂಗಾಂಗಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ.
ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ನಿಯಮದ ಪ್ರಕಾರ ಹುಲಿಯ ಮೃತ ದೇಹವನ್ನು ಸುಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.