
ಚಾಮರಾಜನಗರ/ಕೊಳ್ಳೇಗಾಲ: ‘ಇದೇ 16ರಂದು (ಶುಕ್ರವಾರ) ಕೆಪಿಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದೆ. ನಾನು ಮತ್ತೆ ಅಧ್ಯಕ್ಷನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಪಕ್ಷ ಕೊಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದರು.
ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇದೇ 20ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಿದೆ. ಪಿಆರ್ಒ ಆಗಿ ತಮಿಳುನಾಡಿನ ನಾಸೀಫನ್ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಪಿಸಿಸಿ ಸದಸ್ಯರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ಪಿಸಿಸಿಗೆ ಆಯ್ಕೆಯಾಗಿರುವ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಮೂರು ವರ್ಷಗಳಿಂದ ಇವರು ಯಾಕೆ ಸುಮ್ಮನಿದ್ದರು? ಎಲ್ಲಿಗೆ ಹೋಗಿದ್ದರು? ಇಷ್ಟೊತ್ತಿಗೆ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ಲಾ’ ಎಂದು ಪ್ರಶ್ನಿಸಿದರು.
ದಾಖಲೆ ಬಿಡುಗಡೆ ಮಾಡಲಿ: ಭ್ರಷ್ಟಾಚಾರದ ದಾಖಲೆ ಬಿಡುಗಡೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ನ ಸಹಕಾರ ಕೇಳಿರುವ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ‘ನಾವೂ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದೇವೆ. ಕುಮಾರಸ್ವಾಮಿ ಅವರ ಬಳಿ ಏನಿದೆ ಅದನ್ನು ಬಿಡುಗಡೆ ಮಾಡಲಿ. ಬಳಿಕ ತಿಳಿದುಕೊಂಡು ಮಾತಾಡುವೆ’ ಎಂದರು.
ಸರ್ಕಾರದ ವತಿಯಿಂದ ಹಿಂದಿ ದಿವಸ ಆಚರಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಸರ್ಕಾರ ಪ್ರತಿಯೊಂದರಲ್ಲೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.ಹಿಂದಿ ಒಂದು ರಾಷ್ಟ್ರೀಯ ಭಾಷೆ.ನೋಟಿನಲ್ಲೂ ಹಿಂದಿ ಜೊತೆಗೆ ದೇಶದ ಎಲ್ಲ ಭಾಷೆಗಳನ್ನು ಮುದ್ರಿಸಿದ್ದಾರೆ. ರಾಷ್ಟ್ರೀಯ ಭಾಷೆಗೆ ಗೌರವ ಕೊಡುವುದರ ಬಗ್ಗೆ ನಮ್ಮ ತಕಾರಾರಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಉಳಿಯಬೇಕು.ನಮ್ಮ ತಾಯಿ ಭಾಷೆ ಕನ್ನಡ. ಅದಕ್ಕೆ ಗೌರವ ಕೊಡಬೇಕು.ವಿದ್ಯಾಭ್ಯಾಸಕ್ಕೆ ಇಂಗ್ಲಿಷ್ ಕೂಡ ಮುಖ್ಯ.ಮೂರು ಭಾಷೆ ಕಲಿಯಲು ಅವಕಾಶವಿದೆ. ಮೂರನೇ ಭಾಷೆಯಾಗಿ ಹಿಂದಿಯನ್ನಾದರೂ ಕಲಿಯಲಿ, ಬೇರೆ ಯಾವುದೇ ಭಾಷೆಯನ್ನಾದರೂ ಕಲಿಯಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.