ADVERTISEMENT

ಚುನಾವಣೆ ಬಹಿಷ್ಕಾರ: ಪಾಳ್ಯ ಗ್ರಾಮಸ್ಥರ ನಿರ್ಧಾರ

ಜಿಲ್ಲಾ ಪಂಚಾಯಿತಿ ಕ್ಷೇತ್ರ ಬದಲಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 6:43 IST
Last Updated 12 ಏಪ್ರಿಲ್ 2021, 6:43 IST
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಸಭೆ ನಡೆಯಿತು
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಸಭೆ ನಡೆಯಿತು   

ಕೊಳ್ಳೇಗಾಲ: ‘ತಾಲ್ಲೂಕಿನ ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮತ್ತೊಂದು ಕ್ಷೇತ್ರಕ್ಕೆ ಬದಲಾವಣೆ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಳ್ಯ ಗ್ರಾಮಸ್ಥರು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಪಾಳ್ಯ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಹೇಳಿದರು.

ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಗ್ರಾಮದ ಎಲ್ಲಾ ಪಕ್ಷದ ಹಾಗೂ ಎಲ್ಲಾ ಜಾತಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸುಮಾರು ವರ್ಷಗಳಿಂದಲೂ ಸಹ ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಇತ್ತು. ಆದರೆ ಈಗ ನಮ್ಮ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮಧುವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಬದಲಾವಣೆ ಮಾಡಿರುವುದು ಖಂಡನೀಯ. 1956 ರಿಂದ 1961ರವರೆಗೆ ಪಾಳ್ಯ ವಿಧಾನಸಭೆ ಕ್ಷೇತ್ರವಾಗಿತ್ತು. ನಂತರ ಹನೂರು ವಿಧಾನಸಭಾ ಕ್ಷೇತ್ರವಾಗಿ ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಮುಂದುವರಿದಿತ್ತು. ಆದರೆ ಈಗ ಚುನಾವಣಾಧಿಕಾರಿಗಳು ಯಾವುದೇ ಜನಪ್ರತಿನಿಧಿಗಳ ಗಮನಕ್ಕೆ ತರದೆ ಪಾಳ್ಯ ಕ್ಷೇತ್ರವನ್ನು ಬದಲಾವಣೆ ಮಾಡಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ ಕೃಷ್ಣ ಅವರು, ಇದರ ವಿರುದ್ದ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಭೆಯಲ್ಲಿ ಪಾಳ್ಯ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿಯ ಅಧ್ಯಕ್ಷ ಜಯಸುಂದರ್, ಉಪಾಧ್ಯಕ್ಷ ಮಹೇಶ್, ರಾಮು, ಗೋಪಾಲನಾಯಕ, ಜಗದೀಶ್‍ ನಾಯಕ, ರಾಚಪ್ಪ, ಸಂಚಾಲಕ ಕುನ್ನನಾಯಕ, ಕಾರ್ಯದರ್ಶಿ ನಂಜುಂಡಸ್ವಾಮಿ, ಸಹ ಕಾರ್ಯದರ್ಶಿ ಶೀಗಣ್ಣ, ಹುಚ್ಚಣ್ಣ, ಸಂಘಟನಾ ಕಾರ್ಯದರ್ಶಿ ಮಂಜು, ಕೋಶಾಧ್ಯಕ್ಷ ಬಿ.ರವಿ, ಕಾನೂನು ಸಲಹೆಗಾರ ಗೋಪಾಲನಾಯಕ ಸೇರಿದಂತೆ ಇತರ ಸದಸ್ಯರು ಮತ್ತು ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.