ADVERTISEMENT

ಬಂಡೀಪುರ| ವಿದ್ಯುತ್‌ ತಂತಿ ಬೇಲಿ ಸ್ಪರ್ಶ, ಹೆಣ್ಣಾನೆಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 10:45 IST
Last Updated 14 ಫೆಬ್ರುವರಿ 2023, 10:45 IST
ವಿದ್ಯುತ್‌ ಆಘಾತದಿಂದ ಗಾಯಗೊಂಡಿರುವ ಹೆಣ್ಣಾನೆಗೆ ಚಿಕಿತ್ಸೆ ನೀಡುತ್ತಿರುವುದು
ವಿದ್ಯುತ್‌ ಆಘಾತದಿಂದ ಗಾಯಗೊಂಡಿರುವ ಹೆಣ್ಣಾನೆಗೆ ಚಿಕಿತ್ಸೆ ನೀಡುತ್ತಿರುವುದು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವ್ಯಾಪ್ತಿಯ ಬರಗಿ ಗ್ರಾಮದಲ್ಲಿ ಜಮೀನೊಂದಕ್ಕೆ ಅಳವಡಿಸಲಾಗಿದ್ದ ವಿದ್ಯುತ್‌ ತಂತಿ ಬೇಲಿ ಸ್ಪ‍ರ್ಶಿಸಿ ಹೆಣ್ಣು ಕಾಡಾನೆಯೊಂದು ತೀವ್ರವಾಗಿ ಗಾಯಗೊಂಡಿದೆ. ಬಂಡೀಪುರದ ಪಶುವೈದ್ಯರು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

ನಾಗಪಟ್ಟಣ ಗ್ರಾಮದ ಪುತ್ರನಪುರರಾಜು ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಹರಿಸಿದ್ದರು. ಮಂಗಳವಾರ ಬೆಳಿಗ್ಗೆ ಹೆಣ್ಣಾನೆ ಜಮೀನಿನಲ್ಲಿ ಬಿದ್ದು ನರಳಾಡುತ್ತಿರುವ ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಹೆಣ್ಣಾನೆಗೆ 25ರಿಂದ 30 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ತೆಂಗಿನಮರಗಳ ನಡುವೆ ನೆಲದಿಂದ ಎರಡು ಅಡಿ ಎತ್ತರದಲ್ಲಿ ತಂತಿ ಬೇಲಿಯನ್ನು ಹಾಕಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ನೀಡಿರುವುದು ಕಂಡು ಬಂದಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.

ADVERTISEMENT

ಚಿಕಿತ್ಸೆ: ತೀವ್ರವಾಗಿ ಗಾಯಗೊಂಡಿರುವ ಆನೆಗೆ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಚಿಕಿತ್ಸೆ ನೀಡುತ್ತಿದ್ದಾರೆ.

ಎಸಿಎಫ್‌ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳ, ಪ್ಲೇಟೋನ್-1 ರ ವಲಯ ಅರಣ್ಯಾಧಿಕಾರಿ ಶ್ರೀ ಎನ್.ಪಿ. ನವೀನ್‌ಕುಮಾರ್, ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಬಿ.ಎಂ ಮಲ್ಲೇಶ್ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.