
ಕೊಳ್ಳೇಗಾಲ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಬೆಂಗಳೂರಿನ ಟೆಕ್ಸಾಕ್ ಸಂಸ್ಥೆಯ ವತಿಯಿಂದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಗಾರವನ್ನು ತಾಲ್ಲೂಕಿನ ಚಿಲಕವಾಡಿ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ಮಾತನಾಡಿ ‘ಕೌಶಲಾಭಿವೃದ್ದಿ, ಉದ್ಯಮಶೀಲತಾ ಅಭಿವೃದ್ದಿ ಹಾಗೂ ನವೀನ ಆಲೋಚನೆಗಳು ಉದ್ಯಮ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದರು.
ಸಿಇಡಿಒಕೆ ಸಂಸ್ಥೆಯ ಜಂಟಿ ನಿರ್ದೇಶಕ ಮಧು ಮಾತನಾಡಿ ಇನ್ಕ್ಯುಬೇಷನ್ ಅಗತ್ಯತೆ ಹಾಗೂ ಉದ್ದೇಶಗಳ ಬಗ್ಗೆ ವಿವರಿಸಿ ಅಭಿವೃದ್ದಿಯ ದೃಷ್ಟಿಕೋನ ಹಾಗೂ ನವೀನ ಆಲೋಚನೆಗಳು ಉದ್ಯಮವನ್ನು ಬೆಳೆಸಬಲ್ಲದು. ಅಧ್ಯಯನದ ಜೊತೆಗೆ ಸ್ವಯಂ ಉದ್ಯೋಗ ಕಟ್ಟುವತ್ತ ಉದ್ಯಮಿಗಳು ಚಿತ್ತ ಹರಿಸಬೇಕು, ಉದ್ಯಮಶೀಲತೆಯಿಂದ ವೇಗವಾಗಿ ಆದಾಯಗಳಿಸಲು ಸಾಧ್ಯ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಬಿ.ವಿಜಯಕುಮಾರ್ ಇನ್ ಕ್ಯೂಬೇಷನ್ ಮಹತ್ವ, ಮೌಲ್ಯ, ಶಿಕ್ಷಣ ವ್ಯವಸ್ಥೆ, ಉದ್ಯಮಶೀಲತೆಗೆ ಸಂಬಂಧಿಸಿದ ಪ್ರಾಯೋಗಿಕ ಆಲೋಚನೆಗಳ ಕುರಿತು ಮಾಹಿತಿ ನೀಡಿದರು. ಯುವಜನತೆ ಕಾರ್ಮಿಕರಾಗಿ ಉಳಿಯದೆ ಉದ್ಯಮಿಗಳಾಗುವತ್ತ ಆಸಕ್ತಿ ತೋರಬೇಕು. ವಿದ್ಯಾರ್ಥಿ ಜೀವನದ ಹಂತದಲ್ಲೇ ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಶರಣ್ಯಾ ರಾಜೇಂದ್ರ ಮಾತನಾಡಿ ‘ಮಹಿಳಾ ಸಬಲೀಕರಣಕ್ಕೆ ಉದ್ಯಮಶೀಲತೆ ಅಗತ್ಯ. ಸ್ವ ಉದ್ಯೋಗ ಸೃಷ್ಟಿಯಿಂದ ಸಮಾಜದಲ್ಲಿ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸ್ವಾವಲಂಬಿಗಳಾಗಿ ರೂಪುಗೊಳ್ಳಬಹುದು’ ಎಂದು ವಿವರಿಸಿದರು.
ಮೈಸೂರು ಎನ್ಐಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜನಾರ್ಧನ್ ಸ್ವಾಮಿ ಇನ್ ಕ್ಯೂಬೇಷನ್ ಕಾರ್ಯಕ್ರಮ ಕುರಿತು ತಾಂತ್ರಿಕ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.