
ಕೊಳ್ಳೇಗಾಲ: ಭತ್ತ, ರಾಗಿ, ಹುರುಳಿ ಸೇರಿದಂತೆ ಅನೇಕ ಬೆಳೆಗಳನ್ನು ಒಕ್ಕಣೆ ಮಾಡಲು ರಸ್ತೆಗೆ ಹಾಕುತ್ತಿದ್ದ ರೈತರಿಗೆ ಅಧಿಕಾರಿಗಳು ಅರಿವು ಮೂಡಿಸಿ ಎಚ್ಚರಿಕೆ ನೀಡಿದ್ದಾರೆ.
ಹೆಚ್ಚು ವಾಹನಗಳು ಸಂಚಾರ ಮಾಡುವ ರಸ್ತೆಯನ್ನೇ ಆಯ್ಕೆ ಮಾಡಿಕೊಂಡು ದವಸ ಧಾನ್ಯಗಳನ್ನು ಕೆಲ ರೈತರು ತಂದು ಸುರಿಯುತ್ತಿದ್ದರು. ಇದರಿಂದ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿತ್ತು. ಡಾಂಬರ್ ರಸ್ತೆ ಮೇಲೆ ಧಾನ್ಯಗಳನ್ನು ಹಾಕುತ್ತಿದ್ದರಿಂದ ರಸ್ತೆಗಳು ಕಾಣುತ್ತಿರಲಿಲ್ಲ, ಹಾಗಾಗಿ ವಾಹನ ಸವಾರರು ಮಣ್ಣಿನ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅದರಲ್ಲೂ ಹೆಚ್ಚಾಗಿ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದರು.
ಈ ಬಗ್ಗೆ ‘ಪ್ರಜಾವಾಣಿ’ ಜ.4ರ ಸಂಚಿಕೆಯಲ್ಲಿ ‘ರಸ್ತೆಯಲ್ಲಿ ಒಕ್ಕಣೆ ಜನರಿಗೆ ತೊಂದರೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಒಕ್ಕಣೆ ಮಾಡುವ ರೈತರಿಗೆ ಮೌಖಿಕವಾಗಿ ಹೇಳಿ, ಅರಿವು ಮೂಡಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಅವರು ರಸ್ತೆಯಲ್ಲಿ ಒಕ್ಕಣೆ ಮಾಡುವ ರೈತರಿಗೆ ಅರಿವು ಮೂಡಿಸಿದರು.
‘ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಸವಾರರಿಗೆ ತೊಂದರೆ ಉಂಟಾಗುತ್ತದೆ, ಹಾಗಾಗಿ ರೈತರು ಸಹಕರಿಸುವಂತೆ ತಿಳಿಸಲಾಗಿದೆ. ಇದೇ ರೀತಿ ಮುಂದುವರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.