ADVERTISEMENT

ಸುತ್ತೂರು ಶ್ರೀ ಭೇಟಿ ಮಾಡಿದ ರಂಜನ್‌ ಗೊಗೊಯಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 15:36 IST
Last Updated 13 ಜನವರಿ 2020, 15:36 IST
ರಂಜನ್‌ ಗೊಗೊಯಿ ದಂಪತಿಯನ್ನು ಸುತ್ತೂರು ಶ್ರೀಗಳು ಸನ್ಮಾನಿಸಿದರು. ಉದ್ಯಮಿ ವಿಜಯ್‌ ಕುಮಾರ್‌ ಇದ್ದಾರೆ
ರಂಜನ್‌ ಗೊಗೊಯಿ ದಂಪತಿಯನ್ನು ಸುತ್ತೂರು ಶ್ರೀಗಳು ಸನ್ಮಾನಿಸಿದರು. ಉದ್ಯಮಿ ವಿಜಯ್‌ ಕುಮಾರ್‌ ಇದ್ದಾರೆ   

ಚಾಮರಾಜನಗರ: ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಸೋಮವಾರ ಬಿಳಿಗಿರಿರಂಗನಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

ರಂಜನ್‌ ಗೊಗೊಯಿ ಅವರ ಪತ್ನಿ ರೂಪಾಂಜಲಿ ಕೂಡ ಜೊತೆಗಿದ್ದರು.ಬೆಳಿಗ್ಗೆ 10.30ರ ಹೊತ್ತಿಗೆ ಶಾಖಾ ಮಠಕ್ಕೆ ಬಂದ ಗೊಗೊಯಿ ದಂಪತಿಯನ್ನು ಮಂಗಳವಾದ್ಯ, ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸುತ್ತೂರು ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ಉಚಿತ ಶಿಕ್ಷಣ ಪಡೆಯುತ್ತಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರು, ಗೊಗೊಯಿ ಅವರಿಗೆ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.

‌ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಸಮಾಲೋಚನೆ ನಡೆಸಿದರು. ಮಠದ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಉಪಾಹಾರ ಸೇವಿಸಿದ ನಂತರ ಶ್ರೀಗಳೊಂದಿಗೆ 20 ನಿಮಿಷಕ್ಕೂ ಹೆಚ್ಚು ಖಾಸಗಿಯಾಗಿ ಮಾತುಕತೆ ನಡೆಸಿದರು.

ADVERTISEMENT

ನಿರಾಕರಣೆ: ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲು ಗೊಗೊಯಿ ಅವರು ನಿರಾಕರಿಸಿದರು.

ಎರಡು ದಿನಗಳ ಪ್ರವಾಸ:ಎರಡು ದಿನಗಳ ಭೇಟಿಗಾಗಿ ಚಾಮರಾಜನಗರಕ್ಕೆ ಬಂದಿದ್ದ ಗೊಗೊಯಿ ದಂಪತಿ ಅವರು, ಭಾನುವಾರ ಚಾಮರಾಜನಗರದ ಬಳಿಯ ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ನಂತರ ದೀನಬಂಧು ಸಂಸ್ಥೆಗೆ ಭೇಟಿ ನೀಡಿದ್ದ ಅವರು, ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಸ್ತುಪ್ರದರ್ಶನವನ್ನು ಉದ್ಘಾಟಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ್‌ ಅವರಿಂದ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದಿದ್ದರು. ರಾತ್ರಿ ಬಿಆರ್‌ಟಿ ವ್ಯಾಪ್ತಿಗೆ ಕೆ.ಗುಡಿಯ ಜಂಗಲ್‌ ಲಾಡ್ಜಸ್‌ ಅಂಡ್ ರೆಸಾರ್ಟ್ಸ್‌ನಲ್ಲಿ ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.