ADVERTISEMENT

ಯಳಂದೂರು | ಗೌರಿ–ಗಣೇಶ ಹಬ್ಬ: ಪೊಲೀಸರಿಂದ ಪಥ ಸಂಚಲನ

100ಕ್ಕೂ ಹೆಚ್ಚಿನ ಪೊಲೀಸ್ ಮತ್ತು ಗೃಹ ರಕ್ಷಕ ದಳದಿಂದ ಶಾಂತಿ ಸಂದೇಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:25 IST
Last Updated 8 ಸೆಪ್ಟೆಂಬರ್ 2024, 14:25 IST
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಯಳಂದೂರಿನ ವಿವಿಧ ಬಡಾವಣೆಗಳಲ್ಲಿ ಪಟ್ಟಣ ಠಾಣೆಯ ಪೊಲೀಸರು ಭಾನುವಾರ ಪಥ ಸಂಚಲನ ನಡೆಸಿದರು
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಯಳಂದೂರಿನ ವಿವಿಧ ಬಡಾವಣೆಗಳಲ್ಲಿ ಪಟ್ಟಣ ಠಾಣೆಯ ಪೊಲೀಸರು ಭಾನುವಾರ ಪಥ ಸಂಚಲನ ನಡೆಸಿದರು   

ಯಳಂದೂರು: ಗೌರಿ-ಗಣೇಶ ಹಬ್ಬದ ನಿಮಿತ್ತ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಮತ್ತು ಪಟ್ಟಣ ಠಾಣಾ ಪೊಲೀಸರು ಭಾನುವಾರ ಪಥ ಸಂಚಲನ ನಡೆಸಿದರು.

ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಮಾತನಾಡಿ, ‘ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡುವೆ ಯಾವುದೇ ಗಲಾಟೆ ಗದ್ಧಲಕ್ಕೆ ಅವಕಾಶ ನೀಡಬಾರದು. ಸಂಜೆ ಮತ್ತು ರಾತ್ರಿ ನಿಗದಿಪಡಿಸಿದ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ವೃದ್ಧರು, ರೋಗಿಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಬ್ಬರದ ಧ್ವನಿವರ್ಧಕ ಮತ್ತು ಡಿಜೆ ಬಳಕೆ ನಿಯಂತ್ರಿಸಲಾಗಿದೆ’ ಎಂದರು.

‘ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಈಗಾಗಲೇ ಸಭೆ ಆಯೋಜಿಸಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸಿ ಅವುಗಳನ್ನು ಪರಿಹರಿಸಲು ಪೊಲೀಸರು ಬದ್ಧರಾಗಿದ್ದಾರೆ. ಹಾಗಾಗಿ, ನಿಬಂಧನೆಗಳಿಗೆ ಒಳಪಟ್ಟು, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಬಳೆಪೇಟೆ ಸೇರಿದಂತೆ 11 ವಾರ್ಡ್‌ಗಳಲ್ಲಿ ಪೊಲೀಸರು ಶಾಂತಿ ಸಂದೇಶ ಸಾರಿದರು. ಪಿಎಸ್ಐ ಹನುಮಂತ ಉಪ್ಪಾರ್, ಮಾಂಬಳ್ಳಿ ಠಾಣೆಯ ಎಸ್ಐ ಎನ್. ಕರಿಬಸಪ್ಪ, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.