ಮಹದೇಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಮಂಗಳವಾರ ಸ್ವರ್ಣಗೌರಿ ವ್ರತ ಆರಂಭವಾಯಿತು. ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಅರ್ಚಕರ ಸಮ್ಮುಖದಲ್ಲಿ ಮಂಗಳವಾರ ಕ್ಷೇತ್ರದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
5 ದಿನಗಳ ಕಾಲ ಕ್ಷೇತ್ರದಲ್ಲ ಮಾದಪ್ಪನ ಜೊತೆಗೆ ಗೌರಿಗೂ ಪೂಜೆ ನೆರವೇರುವುದು ವಿಶೇಷ.
ಗೌರಿ ಹಬ್ಬದ ದಿನವಾದ ಉಪವಾಸನಿರತರಾಗಿದ್ದ ಬೇಡಗಂಪಣ ಅರ್ಚಕರು, ಸಾಲೂರು ಶ್ರೀಗಳು ಹಾಗೂ ಭಕ್ತವೃಂದ ಮೆರವಣಿಗೆಯ ಮೂಲಕ ಅಂತರಗಂಗೆ ಸಮೀಪದ ಗೌರಿ ಹೊಂಡಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿತು. ತಲಕಾವೇರಿಯಲ್ಲಿ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವಾಗುವಂತೆ ಗೌರಿಹಬ್ಬದ ದಿನ ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯ ಗೌರಿ ಹೊಂಡದಲ್ಲೂ ನೀರು ಜಿನುಗುತ್ತದೆ.
ಪೂಜೆ ವೇಳೆ ಹೊಂಡದಲ್ಲಿ ನೀರು ಜಿನುಗುತ್ತಿದ್ದಂತೆಯೇ ಗೌರಿಗೆ ಬಾಗಿನ ಅರ್ಪಿಸಲಾಯಿತು. ಬಿಲ್ವಾರ್ಚನೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ನಂತರ ಮಾದಪ್ಪನ ಅಭಿಷೇಕಕ್ಕೆ ಬೆಳ್ಳಿ ಕೊಡದಲ್ಲಿ ಹಾಗೂ ಗೌರಿ ಕಳಸಕ್ಕೆ ಪವಿತ್ರ ನೀರು ತುಂಬಿಸಲಾಯಿತು. ಬಗೆಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ಗೌರಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸವನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಬಂದು ಪ್ರದಕ್ಷಿಣೆ ಹಾಕಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
5 ದಿನಗಳ ಕಾಲ ದೇಗುಲದಲ್ಲಿ ಗೌರಿಗೆ ಪೂಜೆ ಸಲ್ಲುತ್ತದೆ. ನೀರು ತುಂಬಿದ ಕಳಸವನ್ನು ಗರ್ಭಗುಡಿಯಲ್ಲಿ ಇರಿಸಿ ಕ್ಷೇತ್ರದ ಸಂಪ್ರದಾಯದಂತೆ ಪೂಜೆ ನೆರವೇರಲಿದೆ. ಮೊದಲ ದಿನ ಮೊಣ್ಣೆ ಪಾಲಿನವರು, ಎರಡನೇ ದಿನ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ, ಮೂರನೇ ದಿನ ದೊಡ್ಡಪಾಲಿನ ಬೇಡಗಂಪಣ ಕುಲದವರಿಂದ ಪೂಜೆ, 4ನೇ ದಿನ ಚಿಕ್ಕಪಾಲು ಮನೆತನದವರಿಂದ ಹಾಗೂ ಕೊನೆಯ ದಿನ ಸಾಲೂರು ಬೃಹನ್ಮಠದಿಂದ ಪಡಿತರ ಸೇವೆಸಲ್ಲಿಸಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಅಂತರಗಂಗೆಯಲ್ಲಿ ಗೌರಿ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದು ಅರ್ಚಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.