ADVERTISEMENT

ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

ಬಾಲಚಂದ್ರ ಎಚ್.
Published 20 ಜನವರಿ 2026, 1:52 IST
Last Updated 20 ಜನವರಿ 2026, 1:52 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆನೆ ಕಾರಿಡಾರ್ (ಸಂಗ್ರಹ ಚಿತ್ರ)
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆನೆ ಕಾರಿಡಾರ್ (ಸಂಗ್ರಹ ಚಿತ್ರ)   

ಚಾಮರಾಜನಗರ: ಕಾಡಂಚಿನಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆಗಳು ಹಾಗೂ ಬದಲಾದ ಬೆಳೆ ಪದ್ಧತಿಯಿಂದ ಪ್ರಾಣಿಗಳು ನಾಡಿನತ್ತ ಲಗ್ಗೆ ಇಡುವ ಪ್ರಕರಣಗಳು ಹೆಚ್ಚಾಗಿದ್ದು ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದೆ.

ವನ್ಯಜೀವಿಗಳು ನಾಡಿನತ್ತ ಮುಖಮಾಡದಂತೆ ತಡೆಯಲು ತಂತ್ರಜ್ಞಾನದ ಜೊತೆಗೆ ಮಾನವ ಶ್ರಮ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರೈತರ ಬೆಳೆ ನಾಶ ತಡೆಯಲು ಹಾಗೂ ಜನ ಜಾನುವಾರುಗಳ ಮೇಲೆ ದಾಳಿಗೆ ಕಡಿವಾಣ ಹಾಕಲು ಒತ್ತು ನೀಡಲಾಗಿದೆ ಎನ್ನುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಎಸ್‌.ಪ್ರಭಾಕರನ್‌.

ಪ್ರಾಣಿಗಳ ಹಾವಳಿಗೆ ಕಾರಣ: ಹಿಂದೆಲ್ಲ ಕಾಡಂಚಿನ ಜಮೀನುಗಳಲ್ಲಿ ಮಳೆ ಆಧಾರಿತ ಕೃಷಿ ನಡೆಯುತ್ತಿತ್ತು. ಈಚೆಗೆ ಆಧುನಿಕ ಕೃಷಿ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವ ರೈತರು ಬೆಳೆ ಪದ್ಧತಿ ಬದಲಾಯಿಸಿದ್ದು ವರ್ಷಪೂರ್ತಿ ತರಕಾರಿ, ಬಾಳೆ, ಹಣ್ಣು ಸಹಿತ ವನ್ಯಜೀವಿಗಳನ್ನು ಆಕರ್ಷಿಸುವಂತಹ ಆಹಾರ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಬದಲಾದ ಬೆಳೆ ಪದ್ಧತಿಯೂ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ADVERTISEMENT

ಕಾಡಂಚಿನ ಕೃಷಿ ಜಮೀನು ಫಾರ್ಮ್ ಹೌಸ್, ತೋಟಗಳಾಗಿ ಬದಲಾಗುತ್ತಿವೆರುವುದು, ವಾಣಿಜ್ಯ ಬೆಳೆಗಳ ಕ್ಷೇತ್ರ ವಿಸ್ತಾರವಾಗುತ್ತಿರುವುದು ಹಾಗೂ ಜಮೀನಿನೊಳಗೆ ಪ್ರಾಣಿಗಳ ನೀರಡಿಕೆ ತಣಿಸಲು ಪೂರಕವಾಗಿ ನೀರಿನ ಮೂಲಗಳು ಸಿಗುತ್ತಿರುವುದು ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆನೆಗಳಿಗೆ ಗಡಿ ಇಲ್ಲ: ಆನೆಗಳಿಗೆ ನಿರ್ದಿಷ್ಟವಾದ ಗಡಿ ಎಂಬುದಿಲ್ಲ, ಕಾಡಿನೊಳಗೆ ಓಡಾಡುವಂತೆ ಕಾಡಂಚಿನ ಗ್ರಾಮಗಳಲ್ಲಿ, ಕೃಷಿ ಜಮೀನಿನೊಳಗೆ ನುಗ್ಗುತ್ತವೆ. ಜಿಲ್ಲೆಯಲ್ಲಿ ವನ್ಯಜೀವಿ ಧಾಮಗಳು ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚು ಆನೆಗಳು ಇದ್ದು ವಿಶಾಲವಾದ ಆನೆ ಕಾರಿಡಾರ್ ಹೊಂದಿರುವುದರಿಂದ ಬೇಸಗೆಯಲ್ಲಿ ಆನೆಗಳು ಬಂಡೀಪುರ ಅರಣ್ಯದಿಂದ ಕಬಿನಿ ಹಿನ್ನೀರಿನವರೆಗೂ ಆಹಾರ ನೀರು ಅರಸಿ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಹೀಗೆ ಸಾಗುವಾಗ ಕಾಡಂಚಿನಲ್ಲಿರುವ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಪ್ರಾಣಿಗಳು ನಾಡಿನತ್ತ ಮುಖಮಾಡುವುದನ್ನು ತಡೆಯಲು ಬಂಡೀಪುರ ಅರಣ್ಯದಲ್ಲಿ ಕಮಾಂಡಿಗ್ ಸೆಂಟರ್ ತೆರೆಯಲಾಗಿದೆ. ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಪ್ರಾಣಿಗಳು ಕಾಡಿನಿಂದ ಹೊರ ಬರುವುದನ್ನು ಪತ್ತೆಹಚ್ಚಿ ಮಾಹಿತಿ ರವಾನಿಸುತ್ತವೆ. ಇದರ ಆಧಾರದ ಮೇಲೆ ಸಿಬ್ಬಂದಿ ತುರ್ತು ಸ್ಥಳಕ್ಕೆ ತೆರಳಿ ಆನೆಗಳನ್ನು ಕಾಡಿನೊಳಗೆ ಓಡಿಸುವ ಕೆಲಸ ಮಾಡುತ್ತಿದ್ದಾರೆ.

ಇದಲ್ಲದೆ ಕಾಡಂಚಿನಲ್ಲಿ ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಈ ವರ್ಷ 27 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು ಶೀಘ್ರ ಮೊದಲ ಹಂತದಲ್ಲಿ 8 ಕಿ.ಮೀ ಕಾಮಗಾರಿ ಆರಂಭವಾಗಲಿದೆ. 310 ಕಿ.ಮೀ ವಿಸ್ತಾರ ಹೊಂದಿರುವ ಬಂಡೀಪುರ ಅರಣ್ಯದೊಳಗೆ ಸದ್ಯ 90 ಕಿ.ಮೀ ತಡೆ ಬೇಲಿ ನಿರ್ಮಿಸಲಾಗಿದ್ದು ಹಂತ ಹಂತವಾಗಿ ಎಲ್ಲೆಡೆ ತಡೆಬೇಲಿ ಹಾಕಲಾಗುವುದು. ಇದರಿಂದ ಮಾನವ ಪ್ರಾಣಿ ಸಂಘರ್ಷ ತೀರಾ ಕಡಿಮೆಯಾಗಲಿದೆ ಎಂದು ಪ್ರಭಾಕರನ್ ವಿಶ್ವಾಸ ವ್ಯಕ್ತಪಡಿಸಿದರು.

ಎಸ್. ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ

‘ವಿಶ್ವದ ಅತಿದೊಡ್ಡ ಆನೆ ಹುಲಿ ಕಾರಿಡಾರ್’: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಮಿಳುನಾಡಿನ ಮಧುಮಲೈ ಹಾಗೂ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮಗಳು ಕೇರಳದ ವಯನಾಡು ವನ್ಯಜೀವಿ ಧಾಮ ಮಡಿಕೇರಿ ತಲಕಾವೇರಿ ಪುಷ್ಪಗಿರಿ ಅರಣ್ಯದೊಂದಿಗೆ ಬೆಸೆದುಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಆನೆಗಳು ಹಾಗೂ ಹುಲಿಗಳ ಆವಾಸ ಸ್ಥಾನ ಎಂಬ ಹೆಗ್ಗಳಿಕೆಯೂ ಇದೆ. ವಿಶಾಲವಾದ ಆನೆಕಾರಿಡಾರ್ ಹೊಂದಿರುವುದರಿಂದ ಮಾನವ ಪ್ರಾಣಿ ಸಂಘರ್ಷಗಳು ಹೆಚ್ಚಾಗಿದ್ದು ತಡೆಯುವುದು ಬಹುದೊಡ್ಡ ಸವಾಲಾಗಿದೆ ಎನ್ನುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಎಸ್‌.ಪ್ರಭಾಕರನ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.