ADVERTISEMENT

ರೈತರ ಹೋರಾಟಕ್ಕೆ ಬೆಂಬಲ: ಎಸ್‌ಡಿಪಿಐನಿಂದ ಐಕ್ಯತಾ ಜಾಥಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 15:52 IST
Last Updated 26 ಜನವರಿ 2021, 15:52 IST
ಎಸ್‌ಡಿಪಿಐ ಕಾರ್ಯಕರ್ತರು ರೈತ ಐಕ್ಯತಾ ಸಂಗಮದ ಹೆಸರಿನಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಮಂಗಳವಾರ ರ‍್ಯಾಲಿ ನಡೆಸಿದರು
ಎಸ್‌ಡಿಪಿಐ ಕಾರ್ಯಕರ್ತರು ರೈತ ಐಕ್ಯತಾ ಸಂಗಮದ ಹೆಸರಿನಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಮಂಗಳವಾರ ರ‍್ಯಾಲಿ ನಡೆಸಿದರು   

ಚಾಮರಾಜನಗರ: ರೈತ ವಿರೋಧಿ ಕಾನೂನುಗಳನ್ನು ವಾಪಸ್‌ ಪಡಬೇಕು ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ರೈತ ಐಕ್ಯತಾ ಸಂಗಮ ಜಾಥಾ ನಡೆಯಿತು.

ಎಸ್‌ಡಿಪಿಐ ಜಿಲ್ಲಾ ಕಚೇರಿಯಲ್ಲಿ 72ನೇ ವರ್ಷದ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಎಸ್‌ಡಿಪಿಐ ಕಾರ್ಯಕರ್ತರು ಹಾಗೂ ಮುಖಂಡರು ದೆಹಲಿ ಸೇರಿದಂತೆ ದೇಶದಾದ್ಯಂತ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಎತ್ತಿನ ಬಂಡಿ ರ‍್ಯಾಲಿ ನಡೆಸಿದರು.

ಡೀವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿದ ಎತ್ತಿನ ಬಂಡಿ ರ‍್ಯಾಲಿ ರಾಮಸಮುದ್ರದವರೆಗೆ ತೆರಳಿತು. ಅಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಸಂವಿಧಾನ ಪೀಠಿಕೆ ಓದಿದರು. ನಂತರ ಅಲ್ಲಿಂದ ಹೊರಟ ರ‍್ಯಾಲಿ ಎಸ್‌ಡಿಪಿಐ ಜಿಲ್ಲಾ ಕಚೇರಿಯಲ್ಲಿ ಮುಕ್ತಾಯಗೊಂಡಿತು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕಲೀಲ್‌ಉಲ್ಲಾ ಅವರು ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಜನವಿರೋಧಿ ನೀತಿಗಳನ್ನು ರೂಪಿಸಿ ಬಲವಂತವಾಗಿ ಅನುಷ್ಠಾನಗೊಳಿಸುತ್ತಿದೆ. ಈ ಜನ ವಿರೋಧಿ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸದೇ ಬಂಡವಾಳ ಶಾಹಿಗಳ ಪರವಾಗಿ ಯೋಜನೆ ರೂಪಿಸುತ್ತಿದೆ. ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚೆ ನಡೆಸದೆ, ಆರ್ಥಿಕ ತಜ್ಞರ ಸಲಹೆ, ಸೂಚನೆಗಳನ್ನು ಪಡೆಯದೆ ಹಾಗೂ ದೇಶದಲ್ಲಿರುವ ರೈತಪರ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಮಾಲೋಚನೆ ಮಾಡದೆ ಕೇವಲ ಕಾರ್ಪೊರೇಟ್‌ ವಲಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಾದ್ಯಂತ ರೈತರು ಎರಡು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದಾರೆ. ಫ್ಯಾಸಿಸ್ಟ್ ಸಿದ್ಧಾಂತ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ರೈತರ ಬೇಡಿಕೆಗೆ ಕಿವಿಗೊಡದೆ ತನ್ನ ಉದ್ಧಟತನ ಪ್ರದರ್ಶಿಸುತ್ತಿದೆ. ರೈತರಿಗೆ ನ್ಯಾಯ ಒದಗಿಸಿಕೊಡುವುದಕ್ಕಾಗಿ ಪಕ್ಷದ ವತಿಯಿಂದ ನಿರಂತರ ಹೋರಾಟ ಮಾಡಲಾಗುತ್ತದೆ’ ಎಂದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಅಬ್ರಾರ್‌ ಅಹಮದ್, ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಜಿಲ್ಲಾ ಕಾರ್ಯದರ್ಶಿ ಜಬೀನೂರ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಎಸ್.ಸೈಯದ್‌ಆರೀಫ್, ಶಿವಣ್ಣ, ಇಸ್ರಾರ್, ನಗರಸಭಾ ಸದಸ್ಯ ಮೊಹಮ್ಮದ್ ಅಮೀಕ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.