ADVERTISEMENT

ಟಿಕೆಟ್ ಘೋಷಿಸಿದರೆ ಸೋಮಣ್ಣ ವಾಪಸ್ ಹೋಗಿ ಚಳವಳಿ: ಬಿಜೆಪಿ ಮುಖಂಡರಿಂದಲೇ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 6:53 IST
Last Updated 21 ಮಾರ್ಚ್ 2023, 6:53 IST
ಅಯ್ಯನಪುರ ಶಿವಕುಮಾರ್
ಅಯ್ಯನಪುರ ಶಿವಕುಮಾರ್   

ಚಾಮರಾಜನಗರ: ವಸತಿ, ಮೂಲಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಜಿಲ್ಲೆಯ ಚುನಾವಣಾ ಉಸ್ತುವಾರಿ ಜವಾಬ್ದಾರಿ ಮತ್ತು ಯಾವ ಕ್ಷೇತ್ರದಿಂದಲೂ ಟಿಕೆಟ್ ನೀಡಬಾರದು. ಒಂದು ವೇಳೆ ಕೊಟ್ಟರೆ ಸೋಮಣ್ಣ ವಾಪಸ್ ಹೋಗಿ (ಗೋ ಬ್ಯಾಕ್) ಚಳವಳಿ ಹಮ್ಮಿಕೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್ ಮಂಗಳವಾರ ಹೇಳಿದರು.

ಚಾಮರಾಜನಗರದ ಆರು ಮಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಸೋಮಣ್ಣ ಅವರು ಉಸ್ತುವಾರಿ ಸಚಿವರಾದ ಮೇಲೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲಿಗೂ ಕಾರಣರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ. ಅವರಿಂದ ಪಕ್ಷಕ್ಕೆ ಯಾವುದೇ ಅನುಕೂಲವಾಗಿಲ್ಲ. ಹಾಗಾಗಿ, ಜಿಲ್ಲಾ ಚುನಾವಣಾ ಉಸ್ತುವಾರಿ ಜವಾಬ್ದಾರಿ ಕೊಡಬಾರದು' ಎಂದು ಆಗ್ರಹಿಸಿದರು.

'ಉಸ್ತುವಾರಿ ಸಚಿರಾದ ನಂತರವೂ ಕಾಂಗ್ರೆಸ್ ಶಾಸಕರು, ಮುಖಂಡರ ಪರವಾಗಿ ಮಾತನಾಡುತ್ತಲೇ ಬಂದಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನೆ ಸಮಾರಂಭಕ್ಕೆ ಗೈರಾಗುವ ಮೂಲಕ ಪಕ್ಷದ ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ' ಎಂದು ದೂರಿದರು.

ADVERTISEMENT

'ಕಾಂಗ್ರೆಸ್ ಸೇರಲು ಯತ್ನಿಸಿರುವ ಅವರು, ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ಜಿಲ್ಲೆಯಿಂದ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಸೇರುವುದಾಗಿ ವರಿಷ್ಠರಕ್ಕೆ ಬೆದರಿಕೆ ಹಾಕುವ ತಂತ್ರ ಅನುಸರಿಸಿದ್ದಾರೆ' ಎಂದು ಆರೋಪಿಸಿದರು.

'ಚಾಮರಾಜನಗರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ಈ ಭಾಗದಲ್ಲಿ ವಿಜಯೇಂದ್ರ ಅವರಿಗೆ ಚುನಾವಣಾ ಸಾರಥ್ಯ ನೀಡಬೇಕು. ಯಡಿಯೂರಪ್ಪ ಅವರು ಹೆಚ್ಚು ಪ್ರಚಾರದಲ್ಲಿ ತೊಡಗಿಕೊಳ್ಳಬೇಕು' ಎಂದು ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.