
ಕೊಳ್ಳೇಗಾಲ: ರೈತ ಸಂಘದವರು ರೈತರ ಅನುಕೂಲಕ್ಕಾಗಿ ಹೋರಾಟಗಳನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಹೇಳಿದರು.
ನಗರದ ಹೊಸ ಅಣಗಳ್ಳಿ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪ್ರೊ.ನಂಜುಂಡಸ್ವಾಮಿ ಅವರು ಹುಟ್ಟು ಹಾಕಿದ್ದ ಈ ರೈತ ಸಂಘ ರೈತರ ಪರ ಹೋರಾಟ ನಡೆಸಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದೆ. ರಾಜಕಾರಣಿಗಳು ಅವರವರ ಅನುಕೂಲಕ್ಕೆ ತಕ್ಕಂತೆ ಹೋರಾಟ ಮಾಡುತ್ತಾರೆ, ಯಾರು ರೈತರ ಪರವಾಗಿ ಪ್ರಾಮಾಣಿಕವಾಗಿ ಸಹಕರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತಿದ್ದ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ಅನ್ಯಾಯ ಮಾಡಿದಾಗ ಯಾವ ಚಕಾರ ಎತ್ತಲಿಲ್ಲ. ರೈತರು ಒಗ್ಗಟ್ಟಾಗಿ ರೈತರಿಗೆ ಬರುವ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ಮುಂದಾಗಬೇಕು. ಇಡೀ ಪ್ರಪಂಚಕ್ಕೆ ಅನ್ನ ನೀಡುವ ರೈತರ ಬಗ್ಗೆ ಆಯಾ ಸರ್ಕಾರಗಳು ಸ್ಪಂದಿಸಿ ರೈತರಿಗೆ ನೆರವು ನೀಡಲು ಮುಂದಾಗಬೇಕು ಎಂದರು. ಕಾರ್ಯಕ್ರಮದ ಉಸ್ತುವಾರಿ ಯುವ ಮುಖಂಡ ಕೀರ್ತಿರಾಜ್ ರೈತರಿಗೆ ಅನೇಕ ಮಾರ್ಗದರ್ಶನಗಳನ್ನು ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮಾರ್ಟಳ್ಳಿ ಗ್ರಾಮ ಘಟಕ ಅಧ್ಯಕ್ಷ ಅರ್ಪುತರಾಜ್, ಸಿಂಗನಲ್ಲೂರು ಅಧ್ಯಕ್ಷ ಬೆಟ್ಟೇಗೌಡ, ಸತ್ತೇಗಾಲ ಅಧ್ಯಕ್ಷ ಕಚೇರಿ ಮಹದೇವ, ಮಹಿಳಾ ಹೋರಾಟಗಾರರು ಶಶಿ, ಜಕ್ಕಳ್ಳಿ ಲಾರೆನ್ಸ್, ದೊಡ್ಡಿಂದುವಾಡಿ ಅಧ್ಯಕ್ಷರು ವಸಂತ ಕುಮಾರ್, ಮುಖಂಡ ಮಧುವನಹಳ್ಳಿ ಬಸವರಾಜ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.