
ಕೊಳ್ಳೇಗಾಲ: ಇಲ್ಲಿನ ದೇವಾಂಗ ಸಮುದಾಯದ ಬಡಾವಣೆಯಲ್ಲಿರುವ ರಾಮಲಿಂಗ ಚೌಡೇಶ್ವರಿ ದೇವಸ್ಥಾನಕ್ಕೆ ಮಂಗಳವಾರ ಬಡಾವಣೆಯ 2 ಗುಂಪುಗಳು ಪ್ರತ್ಯೇಕ ಬೀಗಗಳನ್ನು ಹಾಕಿ ಕೆಲವೊತ್ತು ಅಶಾಂತಿ ವಾತಾವರಣ ಉಂಟುಮಾಡಿದರು.
ಮುಂದಿನ ವರ್ಷ ನಡೆಯುವ ದೇವರ ಕತ್ತಿ ಹಬ್ಬ ಆಚರಣೆ ಸಂಬಂಧ ಎರಡು ಗುಂಪುಗಳ ನಡುವೆ ವೈಮನಸ್ಸು ಉಂಟಾಗಿತ್ತು. ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಕ್ಕೆ ಹೂವಿನಿಂದ ಅಲಂಕಾರ ಮಾಡಲು ಒಂದು ಗುಂಪಿನ ಶೆಟ್ಟಿಗಾರರಾದ ಚಿಂತು ಪರಮೇಶ್, ಶಿವಕುಮಾರ್, ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹಾಕಿರುವ ಬೀಗವನ್ನು ತೆಗೆಯುವಂತೆ ಅರ್ಚಕ ನಟರಾಜು ಅವರಿಗೆ ಹೇಳಿದರು. ಆಗ ಅರ್ಚಕ ನಟರಾಜು, ಯಜಮಾನ ಅಚ್ಗಾಲ್ ನಾಗರಾಜಯ್ಯ ಅವರು ಬಂದ ಮೇಲೆ ಬೀಗ ತೆಗೆಯುತ್ತೇನೆ ಎಂದಿದ್ದಾರೆ. ಇದರಿಂದ ಕುಪಿತಗೊಂಡ ಮೂವರು ದೇವಸ್ಥಾನದ ಮುಂಭಾಗದ ಗೇಟಿಗೆ ಎರಡು ಬೀಗವನ್ನು ಹಾಕಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ವರ್ಷ, ‘ಒಂದು ಗುಂಪಿನ ಯಜಮಾನ ಅಚ್ಗಾಲ್ ನಾಗರಾಜಯ್ಯ, ಶೆಟ್ಟಿಗಾರರಾದ ವೀರಭದ್ರಯ್ಯ, ಕನಕರಾಜು, ಮತ್ತೊಂದು ಗುಂಪಿನ ಚಿಂತು ಪರಮೇಶ್, ಶಿವಕುಮಾರ್, ಲಕ್ಷ್ಮಣ ಅವರುಗಳನ್ನು ಕರೆಯಿಸಿ ಏಕಾದಶಿಯ ಪ್ರಯುಕ್ತ ದೇವಸ್ಥಾನಕ್ಕೆ ಅನೇಕ ಭಕ್ತರು ಪೂಜೆ ಸಲ್ಲಿಸುವುದಕ್ಕೆ ಬರುತ್ತಿದ್ದಾರೆ. ಆದರೆ ನಿಮ್ಮ ನಿಮ್ಮ ವೈಯಕ್ತಿಕ ದ್ವೇಶಕ್ಕಾಗಿ ಭಕ್ತಾದಿಗಳಿಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಎರಡು ಗುಂಪುಗಳ ಮೇಲೂ ಪ್ರಕರಣ ದಾಖಲು ಮಾಡಿದ್ದೇನೆ. ಹೀಗೆ ಮುಂದುವರಿದರೆ ಕತ್ತಿ ಹಬ್ಬ ಮಾಡದಂತೆಯೂ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿ, ದೇವಸ್ಥಾನಕ್ಕೆ ಹಾಗಿದ್ದ ಬೀಗಗಳನ್ನು ತೆಗೆಸಿದರು.
ನಂತರ ಡಿವೈಎಸ್ಪಿ ಸ್ನೇಹರಾಜ್, ‘ಒಂದೇ ಸಮುದಾಯದವರು ಈ ರೀತಿ ಸಮಸ್ಯೆಗಳನ್ನು ಉಂಟುಮಾಡುವುದು ತಪ್ಪು. ವೈಯಕ್ತಿಕ ಮನಸ್ತಾಪಗಳಿದ್ದರೆ ಎರಡೂ ಗುಂಪಿನವರು ಸಭೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಬೇಕು. ಇದೇ ರೀತಿ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ಉಂಟು ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಬಸವರಾಜು ಭೇಟಿ ನೀಡಿ, ‘ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಏಕೆ ಬೀಗ ಹಾಕಿದ್ದೀರಿ ಎಂದು ಎರಡು ಗುಂಪುಗಳಿಗೆ ತರಾಟೆ ತೆಗೆದುಕೊಂಡರು. ಹೀಗೆ ಭಕ್ತಾದಿಗಳಿಗೆ ತೊಂದರೆ ಉಂಟು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.