
ಕೊಳ್ಳೇಗಾಲ: ‘ಸುಳ್ವಾಡಿ ಕಿಚ್ ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ನೀಡಿರುವುದನ್ನು ಹೈಕೋರ್ಟ್ ಕೂಡಲೇ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿ ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರು, ಬೀದರಹಳ್ಳಿ, ಎಂ.ಜಿ ದೊಡ್ಡಿ ಗ್ರಾಮಸ್ಥರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತಾಲ್ಲೂಕು ಕಚೇರಿಗೆ ಪ್ರತಿಭಟನ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮುಖಂಡ ಮಣಿ ಮಾತನಾಡಿ, ‘ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ 17 ಮಂದಿ ಮೃತಪಟ್ಟಿದ್ದು 120ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿದ್ದರು. ಅಸ್ವಸ್ಥರು ಬದುಕುಳಿದಿರುವುದೇ ಪವಾಡ. ಚಿ ಪ್ರತಿಯೊಬ್ಬರಿಗೂ ವಿವಿಧ ಅಂಗಾಂಗಗಳ ವೈಫಲ್ಯಕಾಣಿಸಿಕೊಂಡು ನರಳುತ್ತಿದ್ದಾರೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಈಗ ಆಗುತ್ತಿಲ್ಲ. ಹೀಗಿದ್ದರೂ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ಅದನ್ನು ರದ್ದು ಮಾಡಬೇಕು. ಇಮ್ಮಡಿ ಮಹದೇವಸ್ವಾಮಿಗೆ ಒಂದು ಕಿಡ್ನಿ ವೈಫಲ್ಯವಾಗಿದೆ ಎಂದು ಹೇಳಿ ಜಾಮೀನು ನೀಡಲಾಗಿದೆ. ವಿಷ ಪ್ರಸಾದ ಪ್ರಕರಣದಲ್ಲಿ 120ಕ್ಕೂ ಹೆಚ್ಚು ಮಂದಿ ಅಂಗಾಂಗ ವೈಫಲ್ಯವಾಗಿ ನರಳುತ್ತಿದ್ದರೂ ಇವರಿಗೆ ಜಾಮೀನು ಬಿಡುಗಡೆ ನೀಡಿರುವುದು ನೋವಿನ ಸಂಗತಿಯಾಗಿದೆ. ರದ್ದುಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಸರೋಜಾ, ಲೋಕೇಶ್, ನರಸಿಂಹ, ಶೋಭಾ, ರಾಜ,, ಷಣ್ಮುಗಂ, ದೊರೆ, ನೇತ್ರಾವತಿ, ದೊಡ್ಡಾಣೆ ಪುಟ್ಟ, ಹಳೇಮಠ ಸುಕನ್ಯ, ಸುಳ್ವಾಡಿ ಮಾದೇವಿ, ದೊಡ್ಡಾಣೆ ಬಸಮ್ಮ, ಎಂ.ಜಿ.ದೊಡ್ಡಿ ವೀರಮ್ಮ, ಬಿದರಹಳ್ಳಿ ರುಕ್ಕಮ್ಮ, ಗ್ರಾಮಸ್ಥರು ಇದ್ದರು.
‘ಭಯದ ವಾತಾವರಣ’
ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಹದೇವಸ್ವಾಮಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಅತ್ಯಂತ ಬಲಿಷ್ಠವಾದ ವ್ಯಕ್ತಿಯಾಗಿದ್ದು ಸಾಕ್ಷಿಗಳನ್ನು ನಾಶ ಮಾಡಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಜಾಮೀನನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಮುಖಂಡ ಮಣಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.