ADVERTISEMENT

ಸಿದ್ದರಾಮಯ್ಯ ಕಾಲದ ಯೋಜನೆಗಳ ಉದ್ಘಾಟಿಸಿದ ಮೋದಿ: ಧ್ರುವನಾರಾಯಣ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 15:25 IST
Last Updated 21 ಜೂನ್ 2022, 15:25 IST
ಆರ್‌.ಧ್ರುವನಾರಾಯಣ 
ಆರ್‌.ಧ್ರುವನಾರಾಯಣ    

ಕೊಳ್ಳೇಗಾಲ: ‘ಯೋಗದ ನೆಪದಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲೇ ಮಂಜೂರಾಗಿದ್ದ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಂಗಳವಾರ ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರೈಲ್ವೆ ಇಲಾಖೆಯ ಕಾರ್ಯಕ್ರಮಗಳನ್ನು ಬಿಟ್ಟರೆ ಯಾವ ಹೊಸ ಯೋಜನೆಯನ್ನೂ ಈ ಡಬಲ್ ಎಂಜಿನ್ ಸರ್ಕಾರ ಕಾರ್ಯಗತ ಮಾಡಿಲ್ಲ. ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಪ್ರಚಾರ ಸಂದರ್ಭದಲ್ಲಿ, 'ಬಿಜೆಪಿ ಅಭ್ಯರ್ಥಿ ರವಿಶಂಕರ್ ಗೆಲ್ಲಿಸಿ ಮೈಸೂರಿಗೆ 21 ರಂದು ಆಗಮಿಸುವ ಪ್ರಧಾನಿ ಅವರಿಗೆ ಗೆಲುವಿನ ಉಡುಗೊರೆ ಕೊಡಬೇಕು" ಎಂದು ಬಿಜೆಪಿ ಮುಖಂಡರು ಪ್ರಚಾರ ಮಾಡಿದ್ದರು. ಆದರೆ ಇಲ್ಲಿನ ಜನರು ಸೋಲಿನ ಉಡಗೊರೆ ನೀಡಿ ಬಿಜೆಪಿಗೆ ಮುಖಭಂಗ ಮಾಡಿದ್ದಾರೆ’ ಎಂದು ಕುಟುಕಿದರು.

‘ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ನಿರುದ್ಯೋಗ ಹಾಗೂ ಬಡತನ ಹೆಚ್ಚಾಗಿದೆ. ಇದು ಕಡು ಭ್ರಷ್ಟಾಚಾರದಿಂದ ತುಂಬಿದ ಸರ್ಕಾರ. ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ’ ಎಂದು ಧ್ರುವನಾರಾಯಣ ಆರೋಪಿಸಿದರು.

ADVERTISEMENT

ಕಾದು ನೋಡಿ: ‘ರಾಜ್ಯ ಹಾಗೂ ಕೇಂದ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಧರ್ಮದ ಹೆಸರಿನಲ್ಲಿ ಎರಡು ಧರ್ಮಗಳ ನಡುವೆ ಕಂದಕ ಉಂಟು ಮಾಡಲಾಗುತ್ತಿದೆ. ಎಲ್ಲವೂ ಕರ್ನಾಟಕ ಜನರ ಮನಸ್ಸಿನಲ್ಲಿ ಇದೆ. 2023ರ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಕಾದು ನೋಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.