ADVERTISEMENT

ಮಲೆ ಮಹದೇಶ್ವರ, ಕಾವೇರಿ ವನ್ಯಧಾಮ ಪರಿಚಯಿಸುವ ಕೃತಿ ಲೋಕಾರ್ಪಣೆ

ಚಾಮರಾಜನಗರ ಜಿಲ್ಲೆ ಜೀವಂತ ಪ್ರಕೃತಿ ಮತ್ತು ಸಂಸ್ಕೃತಿಯ ಸಮಾಗಮ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 12:17 IST
Last Updated 20 ನವೆಂಬರ್ 2020, 12:17 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ‘ಜೇನ್‌ಹಿರ್ಕಾದ ನಾಡಿನಲ್ಲಿ’ ಪುಸ್ತಕ ಬಿಡುಗಡೆ ಮಾಡಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ‘ಜೇನ್‌ಹಿರ್ಕಾದ ನಾಡಿನಲ್ಲಿ’ ಪುಸ್ತಕ ಬಿಡುಗಡೆ ಮಾಡಿದರು   

ಚಾಮರಾಜನಗರ: ‘ಜಿಲ್ಲೆಯು ಜೀವಂತ ಪ್ರಕೃತಿ ಮತ್ತು ಸಂಸ್ಕೃತಿಯ ಸಮಾಗಮ. ಪ್ರಕೃತಿಯಲ್ಲಿನ ಪ್ರಾಣಿ, ಗಿಡ ಮರಗಳನ್ನು ವಿವರಿಸುವುದರ ಜೊತೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ‘ಜೇನ್‌ಹೀರ್ಕದ ನಾಡಿನಲ್ಲಿ’ ಪುಸ್ತಕದಲ್ಲಿ ಪರಿಚಯಿಸುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶುಕ್ರವಾರ ಹೇಳಿದರು.

ವನ್ಯಜೀವಿ ತಜ್ಞರಾದ ಸಂಜಯ್‌ ಗುಬ್ಬಿ ಹಾಗೂ ಎಚ್‌.ಸಿ.ಪೂರ್ಣೇಶ ಅವರು ಬರೆದಿರುವ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳನ್ನು ಪರಿಚಯಿಸುವ ‘ಜೇನ್‌ಹೀರ್ಕದ ನಾಡಿನಲ್ಲಿ’ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್‌) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದು ಕಾಫಿಟೇಬಲ್‌ ಪುಸ್ತಕ. ಸಾಮಾನ್ಯವಾಗಿ ಪ್ರವಾಸಿತಾಣಗಳ ಬಗ್ಗೆ ಈ ಮಾದರಿಯ ಪುಸ್ತಕಗಳನ್ನು ರಚಿಸಲಾಗುತ್ತದೆ. ವನ್ಯಜೀವಿ ಧಾಮಗಳನ್ನು ಪರಿಚಯಿಸುವ ಕಾಫಿ ಟೇಬಲ್‌ ಪುಸ್ತಕ ಬಂದಿರುವುದು ಪ್ರಾಯಶಃ ಇದೇ ಮೊದಲು. ಸಂಜಯ್‌ ಗುಬ್ಬಿ ಮತ್ತು ತಂಡದವರು ಎರಡೂ ವನ್ಯಧಾಮಗಳ ಬಗ್ಗೆ ಸಂಶೋಧನೆ ನಡೆಸಿ, ಅವುಗಳನ್ನು ದಾಖಲಿಸುವ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಗೀಳು ಇದ್ದರೆ ಸಾಧ್ಯ: ‘ನಮ್ಮಲ್ಲಿ ಅರಣ್ಯ ಸಂರಕ್ಷಕರು ಹಾಗೂ ಅವುಗಳ ಬಗ್ಗೆ ತಿಳಿದವರು ತುಂಬಾ ಕಡಿಮೆ. ಸಂಜಯ್‌ ಗುಬ್ಬಿ ಅಂತಹವರಲ್ಲಿ ಒಬ್ಬರು. ಅವರು ಅರಣ್ಯ, ವನ್ಯಜೀವಿ ಸಂರಕ್ಷಣೆಯ ಗೀಳು ಹತ್ತಿಸಿಕೊಂಡಿದ್ದಾರೆ. ಆ ಕಾರಣದಿಂದಾಗಿ ಅವರಿಗೆ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದರು.

‘ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆಯುತ್ತಾರೆ. ಆದರೆ ಅದನ್ನು ದಾಖಲಿಸುವ ಕೆಲಸ ಮಾಡುವುದಿಲ್ಲ. ಯಾವುದೇ ಅನುಭವಗಳು ತಮ್ಮೊಂದಿಗೆ ಸಾಯಬಾರದು. ಅದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು’ ಎಂದು ಎಂ.ಆರ್.ರವಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಮನುಷ್ಯ ಜಗತ್ತಿನಲ್ಲಿ ಇರುವಷ್ಟು ಕ್ರೌರ್ಯ ಬೇರೆಲ್ಲೂ ಇರಲಾರದು. ನಿಸರ್ಗದ ವಿರುದ್ಧವಾದ ಅಭಿ‌ವೃದ್ಧಿಯನ್ನು ಯಾರೂ ಮಾಡಬಾರದು. ಆದರೆ, ಅಭಿವೃದ್ಧಿಯ ನೆಪದಲ್ಲಿ ನಾವು ಪರಿಸರವನ್ನು ನಾಶ ಮಾಡುತ್ತಿದ್ದೇವೆ. ನಾವೇ ಸೃಷ್ಟಿಸಿರುವ ವಿಷವರ್ತುಲದ ಚಕ್ರವ್ಯೂಹದಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ನಾವು ಇನ್ನಷ್ಟು ತಿಳಿದುಕೊಳ್ಳಬೇಕಿದೆ’ ಎಂದರು.

‘ಅರಣ್ಯ ಹಾಗೂ ಪ್ರಾಣಿಗಳ ಬಗ್ಗೆ ಜನರಲ್ಲಿ ತುಂಬಾ ತಪ್ಪು ಕಲ್ಪನೆಗಳಿವೆ. ಅದರಿಂದ ಹೊರಬರಬೇಕಾಗಿದೆ. ಗುಬ್ಬಿ ಹಾಗೂ ಪೂರ್ಣೇಶ ಅವರು ಈ ಪುಸ್ತಕದಲ್ಲಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಮಾತನಾಡಿ, ‘ಜಿಲ್ಲೆಯ ಅರಣ್ಯ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಕೃತಿ’ ಎಂದು ಬಣ್ಣಿಸಿದರು.

ಅರಣ್ಯ ಸಂರಕ್ಷಣೆಯಲ್ಲಿ ಸಂಜಯ್‌ ಗುಬ್ಬಿ ಅವರ ಶ್ರಮವನ್ನು ಶ್ಲಾಘಿಸಿದ ಅವರು, ‘ಮಲೆ ಮಹದೇಶ್ವರ ಅರಣ್ಯ ಪ್ರದೇಶವನ್ನು ವನ್ಯಧಾಮ ಎಂದು ಘೋಷಣೆ ಮಾಡುವಲ್ಲಿ ಗುಬ್ಬಿ ಅವರ ಪಾತ್ರ ದೊಡ್ಡದು. ವನ್ಯಧಾಮವನ್ನು ಘೋಷಣೆ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಸರ್ಕಾರ ಇದಕ್ಕೆ ಪೂರಕವಾದ ಸಾಕಷ್ಟು ದಾಖಲೆಗಳು ಹಾಗೂ ವಿವರಗಳನ್ನು ಕೇಳುತ್ತದೆ. ಗುಬ್ಬಿ ಅವರು ತಮ್ಮ ತಂಡದ ಜೊತೆ ಸೇರಿ ಇಲ್ಲಿನ ಸಸ್ಯ, ಪ್ರಾಣಿ ವೈವಿಧ್ಯಗಳನ್ನು ದಾಖಲಿಸುವ ಕೆಲಸ ಮಾಡಿದ್ದರು. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವ ನಿಟ್ಟಿನಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ’ ಎಂದರು.

ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌.ರಮೇಶ್‌ ಅವರು ಮಾತನಾಡಿ, ‘ಗುಬ್ಬಿ ಅವರು ಅರಣ್ಯದಲ್ಲಿ ತಾವು ಕಂಡು ಕೊಂಡ ಅನುಭವಗಳನ್ನು ಪುಸ್ತಕದ ಮೂಲಕ ದಾಖಲು ಮಾಡಿದ್ದಾರೆ. ವೀರಪ್ಪನ್‌ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಐಎಫ್‌ಎಸ್‌ ಅಧಿಕಾರಿ ಶ್ರೀನಿವಾಸ್‌ ಅವರ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ’ ಎಂದರು.

ಪುಸ್ತಕದ ಲೇಖಕ ಸಂಜಯ್‌ ಗುಬ್ಬಿ ಅವರು ಪುಸ್ತಕದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಕರಾಜು, ಅನಿತಾ, ಪರಿಸರವಾದಿ ದೊರೆಸ್ವಾಮಿ, ಪತ್ರಕರ್ತ ಎ.ಡಿಸಿಲ್ವ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.