ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನಿಗೆ ಬೇಡಗಂಪಣ ವಿಧಿವಿಧಾನದಲ್ಲಿ ಮಹಾಲಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಬುಧವಾರ ನಡೆಯಿತು.
ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಭಕ್ತರಿಗೆ ಪ್ರವೇಶವಿರಲಿಲ್ಲ.
ನಸುಕಿನ ನಾಲ್ಕರಿಂದಲೇ ವಿಶೇಷ ಪೂಜೆ ನೆರವೇರಿದವು. ಸ್ವಾಮಿಗೆ 5.30ರಿಂದ 7ಗಂಟೆಯ ತನಕ ರುದ್ರಾಭಿಷೇಕ ಮಾಡಿದ ಬಳಿಕ, ಫಲಪುಷ್ಪಗಳಿಂದ ಅಲಂಕರಿಸಿ, ಬಿಲ್ವಾರ್ಚನೆ, ಗಂಧಾರ್ಚನೆ, ಪುಷ್ಪಾರ್ಚನೆ ಇನ್ನಿತರೆ ಅರ್ಚನೆಗಳನ್ನು ನೆರವೇರಿಸಲಾಯಿತು.
ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪದ ಸೇವೆಗಳು ನಡೆದವು. 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಹಾ ರುದ್ರಾಭಿಷೇಕ ನೆರವೇರಿಸುವ ಸಮಯದಲ್ಲೇ ಚಪ್ಪರದ ಮಾಳಿಗೆಯಲ್ಲಿ ಮಹದೇಶ್ವರ ಸ್ವಾಮಿಯ ಮುಖವಾಡ ಇಟ್ಟು, ರುದ್ರಾಭಿಷೇಕ ನೆರವೇರಿಸಲಾಯಿತು.
ಪ್ರತಿ ವರ್ಷವೂ ಜರುಗುವಂತೆ, ಈ ವರ್ಷವೂ ಸಂಜೆ 6.30ರ ಸಮಯದಲ್ಲಿ ಸ್ವಾಮಿಯ ಬೆಳ್ಳಿ ಮುಖವಾಡ, ಬೆಳ್ಳಿ ಕೊಳಗವಿಟ್ಟು ರುದ್ರಾಭಿಷೇಕ ಜರುಗಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.