ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ ಶಿವರಾತ್ರಿ ಜಾತ್ರೆ ನಡೆದ ತಿಂಗಳಲ್ಲಿ ದಾಖಲೆಯ ₹ 2.51 ಕೋಟಿ ಹಣ ಸಂಗ್ರಹವಾಗಿದೆ.
ದೇವಾಲಯದ ಮಟ್ಟಿಗೆ ಇಷ್ಟು ಹಣ ಹುಂಡಿ ಕಾಣಿಕೆ ರೂಪದಲ್ಲಿ ಬಂದಿರುವುದು ಇದೇ ಮೊದಲು. ಕಳೆದ ವರ್ಷ ₹ 2.17 ಕೋಟಿ ಸಂಗ್ರಹವಾಗಿತ್ತು.
ವಿಶ್ರಾಂತಿ ಗೃಹದಲ್ಲಿ ಶನಿವಾರ ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ಹುಂಡಿ ಎಣಿಕೆ ಕಾರ್ಯ, ರಾತ್ರಿ 11.30ರವರೆಗೂ ನಡೆಯಿತು.
ನೋಟು ಹಾಗೂ ನಾಣ್ಯದ ರೂಪದಲ್ಲಿ ₹ 2,51,61,247 ಮೊತ್ತ ಹಣವನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ಇದರ ಜೊತೆಗೆ 50 ಗ್ರಾಂ ಚಿನ್ನ ಹಾಗೂ 2.40 ಕೆ.ಜಿ.ಯ ಬೆಳ್ಳಿ ವಸ್ತುಗಳೂ ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಬಿದ್ದಿವೆ.
ನಾಣ್ಯಗಳೇ ₹ 15 ಲಕ್ಷ: ಒಟ್ಟು ₹ 15,21,344 ಮೊತ್ತ ನಾಣ್ಯಗಳ ರೂಪದಲ್ಲಿ ಬಂದಿದೆ. ಇಷ್ಟು ಬೃಹತ್ ಮೊತ್ತದ ನಾಣ್ಯಗಳು ಕಾಣಿಕೆ ರೂಪದಲ್ಲಿ ಇದುವರೆಗೂ ಬಂದಿಲ್ಲ. ಚಿನ್ನದ ತೇರಿನ ಮೇಲೆ ನಾಣ್ಯಗಳನ್ನು ಎಸೆಯಬಾರದು ಎಂದು ಭಕ್ತರಲ್ಲಿ ಅರಿವು ಮೂಡಿಸಿದ ನಂತರ ಭಕ್ತರು ಹುಂಡಿಗಳಿಗೆ ನಾಣ್ಯಗಳನ್ನು ಹಾಕಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.
ಸಾಲೂರು ಬೃಹನ್ಮಠದ ಗುರುಸ್ವಾಮಿಗಳ ನೇತೃತ್ವದಲ್ಲಿ ದೇವಾಲಯದಲ್ಲಿನ ಹುಂಡಿ ವರ್ಗಾವಣೆ ಹಾಗೂ ಎಣಿಕೆ ಕಾರ್ಯ ನಡೆಸಲಾಯಿತು.ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಪೊಲೀಸರು ಹಾಗೂ ದೇವಾಲಯದ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.