ADVERTISEMENT

ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿ, ಶಾಲೆಗಳಲ್ಲಿ ‘ಅವ್ಯವಸ್ಥೆ‘

ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅಸಮಾಧಾನ; ನಾಲ್ವರ ವಿರುದ್ಧ ಶಿಸ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:39 IST
Last Updated 5 ಫೆಬ್ರುವರಿ 2026, 6:39 IST
ಚಾಮರಾಜನಗರದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಬುಧವಾರ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು
ಚಾಮರಾಜನಗರದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಬುಧವಾರ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು   
‘ಬಡವರ ಆಹಾರ ಕಸಿಯುವ ಕೆಲಸ ಬೇಡ’ | ‘ಆಹಾರ ಭದ್ರತಾ ಕಾಯ್ದೆಯ ಆಶಯ ಜಾರಿಯಾಗಲಿ’ | ‘ಗುಣಮಟ್ಟದ ಆಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು’

ಚಾಮರಾಜನಗರ: ‘ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಅಶುಚಿತ್ವ, ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಮೂಲಸೌಕರ್ಯಗಳ ಕೊರತೆ, ಅಂಗನವಾಡಿಗಳಲ್ಲಿ ಸಮರ್ಪಕವಾಗಿ ವಿತರಣೆಯಾಗದ ಪೌಷ್ಟಿಕ ಆಹಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಲೋಪದೋಷ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಿಗದ ಆರೋಗ್ಯ ಸೇವೆ, ಸರ್ಕಾರಿ ಕಚೇರಿಗಳಲ್ಲಿ ಕಡತಗಳ ನಿರ್ವಹಣೆಯಲ್ಲಿ ವೈಫಲ್ಯ, ಹೀಗೆ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿದೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಿ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ‘ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಪೂರೈಕೆ, ಆರೋಗ್ಯ ಸೇವೆ ನೀಡುವಲ್ಲಿ ಲೋಪದೋಷಗಳು ಕಂಡುಬಂದಿದ್ದು, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬಂಡಿಗೆರೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನೇ ವಿತರಣೆ ಮಾಡದಿದ್ದರೂ ರಿಜಿಸ್ಟರ್‌ ಪುಸ್ತಕದಲ್ಲಿ ವಿತರಣೆ ಮಾಡಿರುವುದಾಗಿ ಉಲ್ಲೇಖಿಸಿರುವುದು ಗಂಭೀರ ಲೋಪ. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಆಹಾರ ಪದಾರ್ಥಗಳ ದುರುಪಯೋಗ ಕಂಡುಬಂದಿದೆ. ತರಕಾರಿ, ಬೇಳೆ ಸಹಿತ ಆಹಾರ ಪದಾರ್ಥಗಳ ದಾಸ್ತಾನು ವಿವರಗಳು ಲಭ್ಯವಿಲ್ಲ, ಮೆನು ಪ್ರಕಾರ ಆಹಾರ ವಿತರಣೆ ಮಾಡುತ್ತಿರಲಿಲ್ಲ, ಶೌಚಾಲಯಗಳು ದುರ್ವಾಸನೆಯಿಂದ ಕೂಡಿದ್ದವು. ಈ ಸಂಬಂಧ ಬಿಸಿಯೂಟ ನಿರ್ವಹಣೆಯ ಜವಾಬ್ದಾರಿ ಹೊತ್ತ ಸಿಬ್ಬಂದಿಯನ್ನು 1 ತಿಂಗಳು ಕಡ್ಡಾಯ ರಜೆ ಮೇಲೆ ಕಳುಹಿಸಲು ಶಿಫಾರಸು ಮಾಡಲಾಗಿದೆ.

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಆಹಾರ ದಾಸ್ತಾನು, ಗುಣಮಟ್ಟ, ಸುರಕ್ಷತೆ, ಸೌಲಭ್ಯ, ಹಾಜರಾತಿ ಸಹಿತ 28 ರಿಜಿಸ್ಟರ್‌ಗಳನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು. ಆದರೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಕೇವಲ 3ರಿಂದ 4 ರಿಜಿಸ್ಟರ್‌ಗಳ ನಿರ್ವಹಣೆ ಮಾಡಲಾಗಿದೆ. ಆಹಾರ ದಾಸ್ತಾನು ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ವಾರ್ಡನ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲೂ ನಿರ್ವಹಣೆ ಕೊರತೆ ಕಂಡುಬಂದಿದೆ. ಶೌಚಾಲಯಗಳು ಶುಚಿಯಾಗಿಲ್ಲ, ಗ್ರಂಥಾಲಗಳು ಲಭ್ಯವಿಲ್ಲ, ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಲ್ಲ, ಸಮವಸ್ತ್ರ ವಿತರಿಸಿಲ್ಲ, ಕ್ರೀಡಾ ಪರಿಕರಗಳ ಕಿಟ್‌ ವಿತರಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಧ್ಯಕ್ಷರು ಸಿಡಿಮಿಡಿಕೊಂಡರು.

‘ಒಂದು ಲೀಟರ್ ಹಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಟೀ ಮಾಡಿ ಕೊಡಲಾಗುತ್ತಿದೆ, 80 ಕೆ.ಜಿ ಕೋಳಿ ಮಾಂಸ ಖರೀದಿಸಿದ ಬಿಲ್‌ ಕೊಟ್ಟು ಕೇವಲ 20 ಕೆ.ಜಿ ಕೋಳಿ ಮಾಂಸ ಖರೀದಿಸಲಾಗಿದೆ. ಸೋಲಾರ್ ವ್ಯವಸ್ಥೆ ಇಲ್ಲ, ಬಿಸಿನೀರು ಸಿಗುವುದಿಲ್ಲ, ವಾಷಿಂಗ್ ಮಷಿನ್ ದುರಸ್ತಿಯಲ್ಲಿದೆ, ಕಿಟಕಿಗಳಿಗೆ ಕರ್ಟನ್ ಹಾಕಿಲ್ಲ, ಬಾಲಕಿಯರಿಗೆ ಸ್ಯಾನಿಟರ್ ಪ್ಯಾಡ್‌ಗಳು ವಿತರಣೆಯಾಗುತ್ತಿಲ್ಲ. ತಿಂಗಳಿಗೆ 20 ಕಸ ಪೊರಕೆ ಖರೀದಿಸಿರುವ ಲೆಕ್ಕ ಬರೆದಿದ್ದರೂ ಇಡೀ ಹಾಸ್ಟೆಲ್‌ನಲ್ಲಿ ಒಂದೆರಡು ಪೊರಕೆಗಳು ಮಾತ್ರ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಉಳ್ಳವರು, ಸರ್ಕಾರಿ ಅಧಿಕಾರಿಗಳ ಮಕ್ಕಳು ದಾಖಲಾತಿ ಪಡೆಯುವುದಿಲ್ಲ, ಬದಲಾಗಿ ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ತೀರಾ ಹಿಂದುಳಿದ ಸಮುದಾಯಗಳು ಓದುತ್ತಾರೆ. ಬಡವರ ಅನ್ನ ಕಸಿಯುವ ಕೆಲಸಕ್ಕೆ ಕೈಹಾಕಬಾರದು, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಮಲ್ಲಯ್ಯನಪುರ ನ್ಯಾಯಬೆಲೆ ಅಂಗಡಿಯಲ್ಲಿ ಫಲಾನಭವಿಗಳಿಗೆ ನಿಗದಿಗಿಂತ ಕಡಿಮೆ ಪಡಿತರ ನೀಡುತ್ತಿರುವುದು ಕಂಡುಬಂದಿದ್ದರಿಂದ ಪರವಾನಗಿ ಅಮಾನತುಗೊಳಿಸಲಾಗಿದೆ. ಹಾಸ್ಟೆಲ್‌, ಶಾಲೆಗಳಲ್ಲಿ ಅಡುಗೆ ಮಾಡುವವರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಕೆ ಮಾಡಬೇಕು, ಅಧಿಕಾರಿಗಳು ಆಹಾರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳಿಸಿ ಗುಣಮಟ್ಟ ಪರೀಕ್ಷೆ ಮಾಡಿಸಬೇಕು’ ಎಂದು ಸೂಚನೆ ನೀಡಿದರು.

ಚರ್ಮ ಕಾಯಿಲೆ, ಅಂಟು ರೋಗ ಇರುವ ಸಿಬ್ಬಂದಿಯನ್ನು ಅಡುಗೆ ಕೆಲಸಕ್ಕೆ ನೇಮಿಸುವಂತಿಲ್ಲ. ಅಡುಗೆ ಮಾಡುವಾಗ ಕಡ್ಡಾಯವಾಗಿ ಮಾಸ್ಕ್‌ ಹಾಗೂ ಕೈಗವಸು ಧರಿಸಬೇಕು ಎಂದು ನಿರ್ದೇಶನ ನೀಡಿದರು. 

ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್‌,  ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಕೆ.ಎಸ್. ವಿಜಯಲಕ್ಷ್ಮೀ, ಎ.ರೋಹಿಣಿ ಪ್ರಿಯಾ, ಮಾರುತಿ ದೊಡ್ಡಣ್ಣನವರ್, ಆಹಾರ ಇಲಾಖೆಯ ಉಪನಿರ್ದೇಶಕ ವಸುಂಧರಾ ಹೆಗಡೆ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

‘ಆಹಾರ ಸುರಕ್ಷತಾ ಅಧಿಕಾರಿಗಳೇ ಇಲ್ಲ’

ಜಿಲ್ಲೆಯ ಯಾವ ತಾಲ್ಲೂಕುಗಳಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳೇ ಇಲ್ಲದಿರುವುದು ಗಂಭೀರ ವಿಚಾರ. ರಸ್ತೆ ಬದಿಯ ಫಾಸ್ಟ್‌ ಫುಡ್ ಸೆಂಟರ್‌ಗಳು ಹೋಟೆಲ್‌ಗಳಲ್ಲಿ ತಯಾರಾಗುವ ಆಹಾರದಲ್ಲಿ ಅಪಾಯಕಾರಿ ಕೃತಕ ಬಣ್ಣ ಟೇಸ್ಟಿಂಗ್ ಸಾಲ್ಟ್‌ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಕೆಮಿಕಲ್ಸ್‌ಯುಕ್ತ ಆಹಾರ ಸೇವನೆಯಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಅಪಾಯಗಳಿದ್ದು ಉಪ ವಿಭಾಗಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಬೇಕು ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನಿಯಮ ಉಲ್ಲಂಘನೆ ಕಂಡುಬಂದರೆ ಹೋಟೆಲ್‌ಗಳನ್ನು ಮುಚ್ಚಿಸಬೇಕು ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಉದಾಸೀನ ತೋರಬಾರದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಅಧ್ಯಕ್ಷ ಡಾ.ಎಚ್‌.ಕೃಷ್ಣ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.