ADVERTISEMENT

ಜನರ ಮನೆ ಬಾಗಿಲಿಗೆ ಪೊಲೀಸ್ ಸೇವೆ: ಎಸ್‌ಪಿ ಬಿ.ಟಿ.ಕವಿತಾ

ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮ : ಎಸ್‌ಪಿ ಬಿ.ಟಿ.ಕವಿತಾ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 4:37 IST
Last Updated 14 ಜುಲೈ 2025, 4:37 IST
ಚಾಮರಾಜನಗರದ ಜೆ.ಎಚ್‌ ಪಟೇಲ್ ಸಭಾಂಗಣದಲ್ಲಿ ಭಾನುವಾರ ಚಾಮರಾಜನಗರ ಉಪ ವಿಭಾಗ ಮಟ್ಟದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್‌ಪಿ ಬಿ.ಟಿ.ಕವಿತಾ ಮಾತನಾಡಿದರು
ಚಾಮರಾಜನಗರದ ಜೆ.ಎಚ್‌ ಪಟೇಲ್ ಸಭಾಂಗಣದಲ್ಲಿ ಭಾನುವಾರ ಚಾಮರಾಜನಗರ ಉಪ ವಿಭಾಗ ಮಟ್ಟದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್‌ಪಿ ಬಿ.ಟಿ.ಕವಿತಾ ಮಾತನಾಡಿದರು   

ಚಾಮರಾಜನಗರ: ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಜಿಲ್ಲೆಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ಹೇಳಿದರು.

ನಗರದ ಜೆ.ಎಚ್‌ ಪಟೇಲ್ ಸಭಾಂಗಣದಲ್ಲಿ ಭಾನುವಾರ ಚಾಮರಾಜನಗರ ಉಪ ವಿಭಾಗ ಮಟ್ಟದ ‘ಮನೆ ಮನೆಗೆ ಪೊಲೀಸ್’ ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅಪರಾಧ ಕೃತ್ಯ ಹಾಗೂ ಪ್ರಕರಣಗಳು ದಾಖಲಾದಾಗ ತನಿಖೆಗೆ ಪೊಲೀಸರು ಸಾರ್ವಜನಿಕರ ಮನೆಗಳಿಗೆ ಹೋಗುವುದು ಸಾಂಪ್ರದಾಯಿಕ ವಿಧಾನ. ಆದರೆ, ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಡಿ ಪೊಲೀಸರೇ ಸಾರ್ವಜನಿಕರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸಬೇಕು ಎಂದರು.

‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಡಿ ಪೊಲೀಸರು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿದಾಗ ಅಪರಾಧ ಕೃತ್ಯಗಳನ್ನು ತಡೆಯುವ ಬಗ್ಗೆ ಮಾಹಿತಿ ನೀಡಬೇಕು. ಈಚೆಗೆ ಹೆಚ್ಚಾಗುತ್ತಿರುವ ಸೈಬರ್ ವಂಚನೆ ಪ್ರಕರಣಗಳಿಂದ ಹೇಗೆ ದೂರವಿರಬೇಕು, ಜಾಗೃತರಾಗಿರಬೇಕು ಎಂಬ ಸಲಹೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ADVERTISEMENT

ಅಪರಾಧ ಕೃತ್ಯಗಳ ತಡೆ, ಅಪರಾಧಗಳ ಪತ್ತೆ ಹಚ್ಚುವಿಕೆ, ಗುಪ್ತಮಾಹಿತಿ ಸಂಗ್ರಹ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಒಡನಾಟ ಹೆಚ್ಚಳ, ಕಾನೂನು ಸುವ್ಯವಸ್ಥೆಯ ವಿಚಾರಗಳಲ್ಲಿ ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಎಸ್‌ಪಿ ಹೇಳಿದರು.

ಪೊಲೀಸ್ ಇಲಾಖೆಯ ಕಾರ್ಯವೈಖರಿ ಸರ್ಕಾರದ ಆಡಳಿತ ವ್ಯವಸ್ಥೆಯ ಮಾನದಂಡ ಹಾಗೂ ‌ಅಳತೆಗೋಲಾಗಿರುತ್ತದೆ. ಪೊಲೀಸರ ನಡವಳಿಕೆ ಹಾಗೂ ಕಾರ್ಯವೈಖರಿ ಜನರ ಮನಸ್ಥಿತಿಗೆ ವಿರುದ್ಧವಾಗಿರಬಾರದು. ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಹುಟ್ಟುವಂತೆ ನಡೆದುಕೊಳ್ಳಬೇಕು. ಜಾಗರೂಕರಾಗಿ, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜನರ ಸುರಕ್ಷತೆ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಬೇಕು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚಬೇಕು ಎಂದು ಎಸ್‌ಪಿ ಸೂಚನೆ ನೀಡಿದರು. 

ಡಿವೈಎಸ್‌ಪಿ ಪವನ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್‌ಪಿ ಎಂ.ಎನ್‌.ಶಶಿಧರ್, ಡಿವೈಎಸ್‌ಪಿ ಲಕ್ಷ್ಮಯ್ಯ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.