ADVERTISEMENT

ಚಾಮರಾಜನಗರ: ಸಾಲು ಗಿಡ ನೆಟ್ಟು ಡಾ.ರಾಜ್‌ ಹುಟ್ಟುಹಬ್ಬ ಆಚರಣೆ

ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಮತ್ತು ಸೋಶಿಯಲ್ ಟ್ರಸ್ಟ್‌ನಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 11:12 IST
Last Updated 24 ಏಪ್ರಿಲ್ 2021, 11:12 IST
ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ವೀರಭದ್ರ ದೇವಸ್ಥಾನದ ಮುಂಭಾಗ ಗಿಡ ನೆಡಲಾಯಿತು
ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ವೀರಭದ್ರ ದೇವಸ್ಥಾನದ ಮುಂಭಾಗ ಗಿಡ ನೆಡಲಾಯಿತು   

ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಮತ್ತು ಸೋಶಿಯಲ್ ಟ್ರಸ್ಟ್ ವತಿಯಿಂದ ರಥಬೀದಿಯಲ್ಲಿ 50 ಸಾಲು ಗಿಡಗಳನ್ನು ನೆಡಲಾಯಿತು.

ವೀರಭದ್ರ ದೇವಸ್ಥಾನದ ಮುಂಭಾಗದಲ್ಲಿ ಬರಹಗಾರ ಎಸ್‌.ಲಕ್ಷ್ಮಿನರಸಿಂಹ, ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ ಸೇರಿದಂತೆ ಮತ್ತಿತರು ಗಿಡ ನೆಟ್ಟು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿನರಸಿಂಹ ಅವರು, ‘ಕನ್ನಡಕ್ಕೆ ಭವ್ಯ ಪರಂಪರೆಯನ್ನು ಹಾಕಿಕೊಟ್ಟವರು ಮತ್ತು ಕನ್ನಡ ಚಿತ್ರೋದ್ಯಮ ಕರ್ನಾಟಕದಲ್ಲೇ ನೆಲೆಯೂರಲು ರಾಜ್‌ಕುಮಾರ್ ಅವರೇ ಕಾರಣ. ರಾಜ್‌ಕುಮಾರ್ ಅವರು ಒಂದು ರೀತಿಯಲ್ಲಿ ಸಮಾಜದ ಶಿಕ್ಷಕ. ತಮ್ಮ ಚಿತ್ರಗಳ ಮೂಲಕ ಕುಟುಂಬಗಳು, ಸಮಾಜ ಹೇಗೆ ಇರಬೇಕು ಎಂದು ತೋರಿಸಿಕೊಟ್ಟವರು. ಅವರಂತಹ ನಟರು ನಮಗೆ ಆದರ್ಶವಾಗಿರಬೇಕು’ ಎಂದು ಹೇಳಿದರು.

ADVERTISEMENT

‘ಅವರು ನಟಿಸಿರುವ ಮಯೂರ, ಭಭ್ರುವಾಹನ, ಪುಲಿಕೇಶಿ, ಕೃಷ್ಣದೇವರಾಯ... ಚಿತ್ರಗಳು ಕನ್ನಡದ ಇತಿಹಾಸಕ್ಕೆ ಬರೆದ ಮುನ್ನುಡಿಯಾಗಿತ್ತು. ಕನ್ನಡದ ಇತಿಹಾಸ ಪುಣ್ಯ ಪುರುಷರನ್ನ ನಮ್ಮ ಕಣ್ಣು ಮುಂದೆಯೇ ತಂದು ನಿಲ್ಲಿಸಿದ ಕೀರ್ತಿ ರಾಜ್‌ಕುಮಾರ್‌ ಅವರಿಗೆ ಸಲ್ಲುತ್ತದೆ. ಕನ್ನಡದ ಚಳುವಳಿಗೂ ಅವರು ಶಕ್ತಿಯನ್ನು ತುಂಬಿದ್ದರು’ ಎಂದರು.

ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ ಅವರು ಮಾತನಾಡಿ, ‘ರಾಜ್‌ಕುಮಾರ್ ಅವರ ಚಿತ್ರಗಳಿಂದ ಕಲಿಯುವುದು ಬಹಳಷ್ಟಿದೆ. ಅವರು ಬಹುತೇಕ ಚಿತ್ರಗಳು ಸಾಮಾಜಿಕ ಸಂದೇಶಗಳನ್ನು ಸಾರುತ್ತಿದ್ದವು. ಬಂಗಾರದ ಮನುಷ್ಯ ಚಿತ್ರ ಯುವಕರನ್ನು ರೈತನಾಗಲು ಪ್ರೇರೇಪಿಸಿತ್ತು. ಜೀವನ ಚೈತ್ರವು ಮದ್ಯಪಾನದ ವಿರುದ್ಧ ಹೋರಾಟ ಮಾಡಿತ್ತು. ಕಾಮನಬಿಲ್ಲು ಚಿತ್ರ ಯೋಗಾಭ್ಯಾಸ ಮಾಡಲು ದಾರಿ ತೋರಿಸಿತು’ ಎಂದು

‘ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಮತ್ತು ಸೋಶಿಯಲ್ ಟ್ರಸ್ಟ್ ಸ್ಥಾಪಕ ವೆಂಕಟೇಶ್ ‌ಅವರು ಇಡೀ ಚಾಮರಾಜನಗರವನ್ನು ಹಸಿರೀಕರಣ ಮಾಡುತ್ತಿದ್ದಾರೆ. ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಗಿಡ ನಡೆವ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ಸೂಚಿಸಿದರು.

ವೆಂಕಟೇಶ್‌ ಅವರು ಮಾತನಾಡಿ, ‘ಟ್ರಸ್ಟ್‌ ವತಿಯಿಂದ ಗಿಡ ನೆಡಲು ಆರಂಭಿಸಿ, ನಾಲ್ಕು ವರ್ಷಗಳು ಪೂರೈಸಿದ್ದು, ಐದನೇ ವರ್ಷದ ಅಂಗವಾಗಿ ರಥದ ಬೀದಿಯಲ್ಲಿ 50 ಗಿಡ ನೆಡೆವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಕರಾದ ನಿಜಗುಣ, ಕರ್ನಾಟಕ ರಕ್ಷಣಾಸೇನೆ ಜಿಲ್ಲಾಧ್ಯಕ್ಷ ಮಿಂಚು ನಾಗೇಂದ್ರ, ಹರಿಪ್ರಸಾದ್ ಮತ್ತು ಆಟೋ ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.