ADVERTISEMENT

ಚಾಮರಾಜನಗರ: ರಂಜಾನ್ ಪ್ರಯುಕ್ತ ಮಸೀದಿಗಳಲ್ಲಿ ಮೊಳಗದ ‘ನಾಥ್’

ಅಲ್ಲಾ ಕಷ್ಟ ಪರಿಹರಿಸುವ ನಂಬಿಕೆ: ಮನೆಗಳಲ್ಲಿ ಪ್ರಾರ್ಥನೆ

ನಾ.ಮಂಜುನಾಥ ಸ್ವಾಮಿ
Published 29 ಏಪ್ರಿಲ್ 2020, 19:45 IST
Last Updated 29 ಏಪ್ರಿಲ್ 2020, 19:45 IST
ಮಾಂಬಳ್ಳಿ ಗ್ರಾಮದ ಮನೆಯೊಂದರಲ್ಲಿ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು
ಮಾಂಬಳ್ಳಿ ಗ್ರಾಮದ ಮನೆಯೊಂದರಲ್ಲಿ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು   

ಯಳಂದೂರು: ಮುಸ್ಲಿಮರ ಪವಿತ್ರ ರಂಜಾನ್‌ ಮಾಸ ಶನಿವಾರದಿಂದ ಆರಂಭವಾಗಿದೆ. ಈ ಬಾರಿಮಸೀದಿಗಳಲ್ಲಿ ಪ್ರಾರ್ಥನೆಯ ಸುಳಿವಿಲ್ಲ. ಜನ ದಟ್ಟಣೆಯ ಗೌಜು–ಗದ್ದಲವಿಲ್ಲ. ಸಮೋಸ,ಕಚೋರಿ, ಫಲೂದದ ವಿನಿಮಯವೂ ನಡೆಯತ್ತಿಲ್ಲ. ಇದಕ್ಕೆಲ್ಲಾ ಕಾರಣ ಕೋವಿಡ್‌–19.

ಕೊರೊನಾ ವೈರಾಣು ತಡೆಗೆ ಲಾಕ್‌ಡೌನ್‌ ಜಾರಿ ಮಾಡಿರುವುದು ಎಲ್ಲದಕ್ಕೂ ಅಡ್ಡಿಯುಂಟು ಮಾಡಿದೆ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿಧಿಸಿರುವುದರಿಂದ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ಅಂತರ ಕಾಯ್ದುಕೊಂಡು ಉಪವಾಸವನ್ನು ಆಚರಿಸುತ್ತಿದ್ದಾರೆ.

ಜನರ ಮುಕ್ತ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಮುಸ್ಲಿಮರು ವಾಸಿಸುವಗಲ್ಲಿ, ಮೊಹಲ್ಲಾಗಳಲ್ಲಿ ಬಣ್ಣದ ಧಿರಿಸುತೊಟ್ಟು ಸಂಭ್ರಮಿಸುತ್ತಿದ್ದವರ ಉತ್ಸಾಹ ಮತ್ತು ಸಂಭ್ರಮದ ಲವಲವಿಕೆ ಈಗಕಂಡುಬರುತ್ತಿಲ್ಲ.

ADVERTISEMENT

‘ನಸುಕಿನ ಫಜರ್‌ ನಮಾಜ್‌ ಮಸೀದಿಯಲ್ಲಿ ಆರಂಭ ಆಗುತ್ತಿತ್ತು. ಬಹುತೇಕರು ಎಲ್ಲಿದ್ದರೂಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ಬಡವರು ಮತ್ತು ನಿರ್ಗತಿಕರಿಗೆದಾನ, ಧರ್ಮ ಮಾಡುತ್ತಿದ್ದರು. ಈಗ ಎಲ್ಲರೂ ಕೊರೊನಾ ಕಾರಣಕ್ಕೆ ಮನೆಯಲ್ಲೇ ಇದ್ದು ನಮಾಜ್‌ ಮಾಡುತ್ತಿದ್ದಾರೆ. ಸ್ನೇಹಿತರು ಮತ್ತು ಬಂಧು–ಬಾಂಧವರುಒಟ್ಟಾಗುವ ಭಾಗ್ಯ ಇಲ್ಲದಂತೆ ಆಗಿದೆ’ ಎಂದು ಪಟ್ಟಣದ ನಿವಾಸಿ ಫೈರೂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿದಿನ ಹಬ್ಬದ ಹೊರತಾಗಿಯೂ ಮೀನಾರುಗಳಲ್ಲಿ ಕಟ್ಟಿದ ಧ್ವನಿ ವರ್ಧಕಗಳಲ್ಲಿ ಸಹ್ರಿಯ ಘೋಷಣೆ ಇಂಪಾಗಿ ಕೇಳುತ್ತಿತ್ತು. ಅಜಾನ್‌ ಕೇಳುತ್ತಲೇ ಮನೆಗಳಲ್ಲಿ ಸಿಹಿ ಮತ್ತು ಖಾರದಖಾದ್ಯಗಳ ತಯಾರಿಗೆ ಮನೆಮಂದಿ ತೊಡಗುತ್ತಿದ್ದರು. ಇವೆಲ್ಲಕ್ಕೂ ಈಗ ತಾತ್ಕಾಲಿಕ ಬಿಡುವುಬಿದ್ದಿದೆ. ಇದರಿಂದ ಸಹ್ರಿಯ ವೇಳೆ ಮಸೀದಿಗಳಲ್ಲಿ ಮೊಳಗುತ್ತಿದ್ದ ನಾಥ್‌ (ಪ್ರವಾದಿಯಸ್ತುತಿ ಗೀತೆ) ಈ ಬಾರಿ ಮೌನವಾಗಿದೆ.

ಇಫ್ತಾರ್‌ ಕೂಟಗಳಿಗೆ ಕೊಕ್‌: ‘ಸಂಜೆ ನಮಾಜ್‌ ನಂತರ ಸೇರುತ್ತಿದ್ದ ಸ್ನೇಹಿತರು ಇಫ್ತಾರ್‌ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಉಪವಾಸ ತೊರೆಯುವ ಸಮಯದಲ್ಲಿ ವೈವಿಧ್ಯಮಯ ಭಕ್ಷ್ಯಗಳನ್ನುಸಿದ್ಧಪಡಿಸಲಾಗುತ್ತಿತ್ತು. ಪಾನೀಯ, ಸಿಹಿಯ ವಿನಿಮಯ ನಡೆಯುತ್ತಿತ್ತು. ಇದಕ್ಕೆಲ್ಲಬ್ರೇಕ್‌ ಬಿದ್ದಿದೆ’ ಎಂದು ದಾವೂದ್‌ ಹೇಳಿದರು.

‘ಪ್ರತಿದಿನದ ಐದು ಹೊತ್ತಿನ ನಮಾಜ್ ಅಲ್ಲದೆ ರಾತ್ರಿ ವೇಳೆ ಮಸೀದಿಗಳಲ್ಲಿ ವಿಶೇಷನಮಾಜ್ (ತರಾವಿಹ್‌) ಇರುತ್ತದೆ. ಇದು ಈಗ ಮನೆಗೆ ಸೀಮಿತವಾಗಿದೆ. ರಂಜಾನ್ ತಿಂಗಳಲ್ಲಿಮಸೀದಿಗಳು ಅಲ್ಲದೆ ಹೊರಗೂ ಕೆಲವೆಡೆ ಇಫ್ತಾರ್‌ ಕೂಟ ಆಯೋಜಿಸಲಾಗುತ್ತಿತ್ತು. ಸಾಮೂಹಿಕ ಉಪವಾಸತೊರೆಯಲು ಈ ಏರ್ಪಾಡು ಮಾಡಲಾಗುತ್ತಿತ್ತು. ಈಗ ಇದಕ್ಕೂ ನಿರ್ಬಂಧ ಇರುವುದರಿಂದ ಎಲ್ಲೂಈ ಆಯೋಜನೆ ಕಂಡುಬರುತ್ತಿಲ್ಲ.

‘ಮುಂದೆ ಒಳ್ಳೆಯದಾಗುತ್ತದೆ’

ಮಸೀದಿಗಳಲ್ಲಿ ಪ್ರಾರ್ಥನೆ ಮಾಡಬಾರದು ಎಂಬ ಸೂಚನೆ ಇದೆ. ಹಾಗಾಗಿ, ಈ ನಿಯಮಉಲ್ಲಂಘಿಸಿದವರ ಮೇಲೆ ಕ್ರಮ ಜರುಗಿಸಲು ಪಟ್ಟಣದ ಬಹುತೇಕ ಮಸೀದಿಗಳ ಮುಂದೆ ಪೊಲೀಸರನ್ನುನಿಯೋಜಿಸಲಾಗಿದೆ.

‘ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡೇ ನಮ್ಮ ಇಬಾದತ್‌ಗಳು (ಆಚರಣೆ) ನಡೆಯುತ್ತಿದೆ. ಹಣ, ಆಹಾರದ ಕೊರತೆ ಇದ್ದರೂ, ಆರಾಧನೆಗೆ ಯಾವುದೇ ಮಿತಿಇಲ್ಲ. ಈ ಸಮಯ ಕುರ್‌ಅನ್‌ ಪಠಿಸಲು ಹೆಚ್ಚು ಅವಕಾಶ ಸಿಗುತ್ತದೆ. ಈಗ ಅಲ್ಲಾ‌ ಕಷ್ಟಕಾಲ ಕೊಟ್ಟಿರಬಹುದು. ಮುಂದೆ ಒಳ್ಳೆ ದಾರಿ ತೋರುತ್ತಾನೆ. ಹೀಗಾಗಿ, ವಿಶ್ವಾಸ ಇಟ್ಟುಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು’ ಎಂದು ಮಾಂಬಳ್ಳಿ ಗ್ರಾಮದ ಮುಖಂಡ ಶಕೀಲ್‌ ಅಹಮದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.