ಗುಂಡ್ಲುಪೇಟೆ: ನಿರಪೇಕ್ಷಣಾ(ಎನ್ಓಸಿ) ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮುಂಟೀಪುರ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಂಟೀಪುರ ರೈತ ಸಂಘ ಗ್ರಾಮ ಘಟಕದ ಗೌರವ ಅಧ್ಯಕ್ಷ ಸಿದ್ದರಾಜು ಮಾತನಾಡಿ, ‘ಮುಂಟೀಪುರ ಗ್ರಾಮದ ರೈತರಿಗೆ 1961-62ರಲ್ಲಿ ಸಾಗುವಳಿ ಚೀಟಿ ನೀಡಿ 63 ವರ್ಷ ಕಳೆದರೂ ದುರಸ್ತಿ ಮತ್ತು ಪೋಡಿ ಆಗಿರುವುದಿಲ್ಲ. ದುರಸ್ತಿ ಮಾಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆದಿರುವುದರಿಂದ ಅರಣ್ಯ ಇಲಾಖೆ ಶೀಘ್ರದಲ್ಲಿ ನಿರಪೇಕ್ಷಣಾ ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಮೀನು ದುರಸ್ತಿ ಮಾಡಿಸುವುದರಿಂದ ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲೀಕತ್ವ ಖಾತ್ರಿ ಪಡೆದುಕೊಳ್ಳುವುದರಿಂದ ಒತ್ತುವರಿಯಾಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಜಮೀನು ಪೋಡಿ ಮಾಡಿಸುವುದು ಕಡ್ಡಾಯವಾಗಿರುವುದರಿಂದ ಅರಣ್ಯ ಇಲಾಖೆ ಜಮೀನು ದುರಸ್ತಿ ಮಾಡಲು ಕೂಡಲೇ ಎನ್ಒಸಿ ನೀಡಬೇಕೆಂದು ಆಗ್ರಹಿಸಿ, ಅರಣ್ಯ ಇಲಾಖೆ ಎನ್ಒಸಿ ನೀಡಲು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಆರ್ಎಫ್ಓ ಶಿವಕುಮಾರ್, ವಾರದೊಳಗೆ ನಿರಪೇಕ್ಷಣಾ(ಎನ್ಓಸಿ) ಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾಧು, ತಾಲ್ಲೂಕು ಘಟಕದ ಅಧ್ಯಕ್ಷ ದಿಲೀಪ್, ಮುಂಟೀಪುರ ಗ್ರಾಮ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ಮಣಿ, ಮುಖಹಳ್ಳಿ ಮಹದೇವಸ್ವಾಮಿ, ಸುರೇಶ್, ರವೀಂದ್ರ, ಲೋಕೇಶ್, ರಾಜು, ಹೂವಯ್ಯ, ವೆಂಕಟರಾಜು, ರವಿಚಂದ್ರ, ದೊರೆಸ್ವಾಮಿ, ಬಿ.ರಾಜು, ಕೃಷ್ಣ, ಸುಭಾಷ್, ಈಶ್ವರ್ ಸೇರಿದಂತೆ ಹಲವು ರೈತ ಸಂಘಟನೆ ಮುಖಂಡರು ಹಾಗೂ ಮುಂಟೀಪುರ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.