
ಚಾಮರಾಜನಗರ: ನಗರಸಭೆಯಲ್ಲಿ ಸಾರ್ವಜನಿಕರಿಗೆ ಜನನ–ಮರಣ ಪ್ರಮಾಣ ಪತ್ರ ವಿತರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರಸಭಾ ಕಾರ್ಯಾಲಯದ ಮುಂದೆ ಎಸ್ಡಿಪಿಐ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಎಸ್ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ ಮಾತನಾಡಿ, ನಗರಸಭೆಯಲ್ಲಿ ಸಮರ್ಪಕವಾಗಿ ಜನನ ಮರಣ ಪ್ರಮಾಣ ಪತ್ರ ವಿತರಣೆ ನಡೆಯುತ್ತಿಲ್ಲ. ಆರೋಗ್ಯ ಶಾಖೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕಿ ಪುಷ್ಪಾ ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪರಿಣಾಮ ತುರ್ತು ಸಂದರ್ಭಗಳಲ್ಲಿ ಜನನ ಮರಣ ಪ್ರಮಾಣ ಪತ್ರ ಸಿಗದೆ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ವಿತರಿಸುವ ಪ್ರಮಾಣಪತ್ರಗಳಲ್ಲೂ ದೋಷಗಳು ಕಂಡುಬರುತ್ತಿದ್ದು ತಿದ್ದುಪಡಿಗೆ ಸಾರ್ವಜನಿಕರು ಕಚೇರಿಗೆ ಅಲೆಯುವುದೇ ಕೆಲಸವಾಗಿದೆ. ಅವ್ಯವಸ್ಥೆಗಳ ವಿರುದ್ಧ ಪೌರಾಯುಕ್ತರಿಗೆ ತಿಳಿಸಿದ್ದರೂ ಕ್ರಮ ಜರುಗಿಸುತ್ತಿಲ್ಲ. ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ ಎಂದು ಹೇಳಿದರು.
ಕೂಡಲೇ ಪೌರಾಯುಕ್ತರು ಜನನ ಮರಣ ಪ್ರಮಾಣ ಪತ್ರ ವಿಳಂಬವಾಗುತ್ತಿರುವುದನ್ನು ತಪ್ಪಿಸಿ ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಕಿರಿಯ ಆರೋಗ್ಯ ನಿರೀಕ್ಷಕಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ್.ಎಂ, ಮೊಹಮ್ಮದ್ ಅಮೀಕ್, ಅಬ್ರಾರ್ ಅಹಮದ್, ನಯಾಜ್ ಉಲ್ಲಾ, ತೌಸಿಫ್, ನಸ್ರುಲ್ಲಾ,
ಇಸ್ರಾರ್, ಕಿಜರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.