ADVERTISEMENT

ಯಳಂದೂರು: ಒಪ್ಪಿಗೆ ಪಡೆಯದೆ ದೂರು ನೀಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ?

ಕೆಸ್ತೂರು ಗ್ರಾಮದ ನಿವಾಸಿಯಿಂದ ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 16:50 IST
Last Updated 4 ಡಿಸೆಂಬರ್ 2020, 16:50 IST
ಯಳಂದೂರು ತಾಲ್ಲೂಕು ನಕ್ಷೆ
ಯಳಂದೂರು ತಾಲ್ಲೂಕು ನಕ್ಷೆ   

ಯಳಂದೂರು: ತಾಲ್ಲೂಕಿನಲ್ಲಿ ಶುಕ್ರವಾರ ಮತ್ತೊಂದು ಸಾಮಾಜಿಕ ಬಹಿಷ್ಕಾರದ ಪ್ರಕರಣ ದಾಖಲಾಗಿದೆ.

‘ಅನುಮತಿ ಪಡೆಯದೇ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ ಸಮುದಾಯದ ಯಜಮಾನರು ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಆರೋಪಿಸಿತಾಲ್ಲೂಕಿನ ಕೆಸ್ತೂರು ಗ್ರಾಮದ ಉಪ್ಪಾರ ಬಡಾವಣೆಯ ಶಾಂತರಾಜು ಅವರು ಶುಕ್ರವಾರಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

‘ಗ್ರಾಮದಲ್ಲಿ ಚರಂಡಿ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮದೇ ಬಡಾವಣೆಯ ಮಾದೇಶ ಮತ್ತು ಸಿದ್ದಶೆಟ್ಟಿ ಅವರೊಂದಿಗೆ ಈ ಹಿಂದೆ ಗಲಾಟೆ ನಡೆದಿತ್ತು. ಈ ಬಗ್ಗೆತಾಯಿ ಚಿಕ್ಕತಾಯಮ್ಮ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ದೂರು ನೀಡುವ ಮೊದಲು ಯಜಮಾನರ ಗಮನಕ್ಕೆತಂದಿಲ್ಲ ಎಂಬುದನ್ನು ನೆಪವಾಗಿ ಇಟ್ಟುಕೊಂಡು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ,ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

ADVERTISEMENT

ಹಲ್ಲೆಯ ಆರೋಪ: ಸಾಮಾಜಿಕ ಬಹಿಷ್ಕಾರ ಹಾಕಿದ ನಂತರ ಇದೇ ವಿಚಾರವಾಗಿ ಮಾದೇಶ ಹಾಗೂ ಸಿದ್ದಶೆಟ್ಟಿ ಹಾಗೂ ದೂರುದಾರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಶುಕ್ರವಾರವೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಈ ವಿಚಾರವನ್ನೂ ಶಾಂತರಾಜು ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

‘ನಾನು ಜಮೀನಿಗೆ ತೆರಳುವಾಗ ಮಾದೇಶ ಮತ್ತು ಸಿದ್ದಶೆಟ್ಟಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಬಗ್ಗೆ, ಕೇಳಿದಾಗ ನನ್ನ ಕತ್ತಿನಪಟ್ಟಿಯನ್ನು ಹಿಡಿದು ಎಳೆದು, ಕೆಳಕ್ಕೆ ಬೀಳಿಸಿದರು. ನಂತರ ಕಾಲಿನಿಂದ ತುಳಿದು ಹಲ್ಲೆಮಾಡಿದರು. ಬಾಯಿಗೆ ಮಚ್ಚಿನ ಹಿಡಿಯಿಂದ ಹೊಡೆದರು. ಈ ಸಂದರ್ಭದಲ್ಲಿ ಸಮೀಪದ ಜಮೀನಿನಲ್ಲಿ ಇದ್ದಪ್ರಸಾದ್ ಅವರು ನನ್ನನ್ನು ರಕ್ಷಿಸಿದರು. ‘ನೀನು ತಪ್ಪಿಸಿಕೊಂಡಿದ್ದೀಯ.ಒಂಟಿಯಾಗಿ ಸಿಕ್ಕರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದರು’ ಎಂಬುದಾಗಿ ಶಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ.

‘ಮಾದೇಶ್ ಮತ್ತು ಸಿದ್ದಶೆಟ್ಟಿ ಸಂಬಂಧಿಗಳಾದ ಚಿಕ್ಕಣ್ಣ ಶೆಟ್ಟಿ, ಶಿವು, ಆರಿತಮ್ಮ,ರಾಜೇಶ್ವರಿ, ಶೋಭ, ನಿಂಗಾಜಮ್ಮ ನಮ್ಮ ಮನೆಗೆ ತೆರಳಿ ನಮ್ಮ ತಂದೆಯನ್ನು ಮನೆಯಿಂದಹೊರಗಡೆ ಎಳೆದುತಂದು ಮೊಣಕೈ ಮತ್ತು ಬಲಗಾಲಿಗೆ ಹೊಡೆದು ಚರಂಡಿಗೆ ತಳ್ಳಿದ್ದಾರೆ.ನಮ್ಮ ತಾಯಿ ಚಿಕ್ಕತಾಯಮ್ಮ ಅವರ ಸೀರೆಯನ್ನು ಎಳೆದು ಹಲ್ಲೆಗೆ ಮುಂದಾಗಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.

‘ಗಲಾಟೆಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಮೇಲೆ ಪ್ರಕರಣ ದಾಖಲಿಕೊಂಡು, ತನಿಖೆ ನಡೆಸುತ್ತಿದ್ದೇವೆ’ ಎಂದು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕರಿಬಸಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.