ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ತಾಲ್ಲೂಕಿನ ಹರದನಹಳ್ಳಿ ಗ್ರಾಮಸ್ಥರು ಸೋಂಕು ನಿಯಂತ್ರಣಕ್ಕಾಗಿ ಗ್ರಾಮ ದೇವತೆಗಳ ಮೊರೆ ಹೋಗಿದ್ದಾರೆ.
ಗ್ರಾಮದ 18 ಜಾತಿಗಳ ಜನರು ಸೇರಿಗ್ರಾಮದೇವತೆಗಳಾದ ಮಾರಮ್ಮ, ಕುಂಟಮ್ಮ, ಕಾಳಮ್ಮ, ಸಿದ್ದಪ್ಪಾಜಿ, ಮಂಟೇಸ್ವಾಮಿಗೆ ಕಂಡಾಯ ಪೂಜೆ, ಗದ್ದುಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮಗಳ ಬೀದಿಗಳಲ್ಲಿ ಕಂಡಾಯ ಗದ್ದುಗೆಗಳ ಮೆರವಣಿಗೆ ಮಾಡಿ, ಕೋವಿಡ್ ನಿಯಂತ್ರಣವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಜಾರಿಗೆ ಬಂದ ಕಾರಣ ಹಲವು ಊರುಗಳಲ್ಲಿ ಕೊಂಡೋತ್ಸವ, ಮಾರಿ ಹಬ್ಬಗಳು ರದ್ದಾಗಿದ್ದವು.
ಈ ಹಿಂದೆ, ಹಿಂದೆ ಪ್ಲೇಗು, ಕಾಲರಾ, ಸಿಡುಬು, ಮಲೇರಿಯ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ಬಂದ ಸಂದರ್ಭದಲ್ಲಿ ವೇಳೆ ಗ್ರಾಮದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಗ್ರಾಮದ ದೇವರನ್ನು ಪೂಜಿಸಿದರೆ ಕಾಯಿಲೆ ದೂರವಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.
‘ನಮ್ಮ ಗ್ರಾಮ ಮಾತ್ರವಲ್ಲದೇ, ಇಡೀ ಜಗತ್ತಿನಲ್ಲಿ ಕೋವಿಡ್–19 ಪ್ರಭಾವ ಕಡಿಮೆಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದ್ದೇವೆ.ನಮ್ಮ ನಂಬಿಕೆ ಯಾವಾಗಲೂ ಹುಸಿಯಾಗುವುದಿಲ್ಲ’ ಎಂದು ಗ್ರಾಮದ ಯಜಮಾನ ರಂಗಸ್ವಾಮಿ ಅವರು ಹೇಳಿದರು.
ಉತ್ಸವದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.