ADVERTISEMENT

ಶ್ರೀನಿವಾಸ ಪ್ರಸಾದ್‌ ಜನ್ಮದಿನ: ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 1:25 IST
Last Updated 7 ಆಗಸ್ಟ್ 2021, 1:25 IST
ವಿ.ಶ್ರೀನಿವಾಸ ಪ್ರಸಾದ್ ಅವರ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ವಿ.ಶ್ರೀನಿವಾಸ ಪ್ರಸಾದ್ ಅವರ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು   

ಚಾಮರಾಜನಗರ:ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ 75ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ವಿ.ಶ್ರೀನಿವಾಸ ಪ್ರಸಾದ್‌ ಅಭಿಮಾನಿ ಬಳಗ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.

ಚಾಮರಾಜನಗರ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಡಾ.ಶರತ್‌ಕುಮಾರ್ ಬಿ. ಜೈಕರ್ ಅವರಿಗೆ ವಿ. ಶ್ರೀನಿವಾಸಪ್ರಸಾದ್ - ವೈದ್ಯ ರತ್ನ ಪ್ರಶಸ್ತಿ, ಪರಿಸರ ಪ್ರೇಮಿ ಸಿ.ಎಂ ವೆಂಕಟೇಶ್ ಅವರಿಗೆ ವಿ. ಶ್ರೀನಿವಾಸಪ್ರಸಾದ್ - ಪರಿಸರ ರತ್ನ ಪ್ರಶಸ್ತಿ, ಗೊರವರ ಕುಣಿತದ ಶಿವಮಲ್ಲೇಗೌಡ ಅವರಿಗೆ ವಿ. ಶ್ರೀನಿವಾಸಪ್ರಸಾದ್ - ಜಾನಪದ ರತ್ನ ಪ್ರಶಸ್ತಿ, ರಂಗಭೂಮಿ ಕಲಾವಿದ ಮಿಮಿಕ್ರಿ ಮಲ್ಲಣ್ಣ ಅವರಿಗೆ ವಿ. ಶ್ರೀನಿವಾಸ ಪ್ರಸಾದ್ - ರಂಗರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಅವರು ಮಾತನಾಡಿ, ‘ಬುದ್ಧ ಭೀಮರ ಆದರ್ಶಗಳನ್ನು ಅಳವಡಿಸಿಕೊಂಡು ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನೇರ ನಡೆ - ದಿಟ್ಟ ನುಡಿಯ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮೈಸೂರು ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮಾನವೀಯತೆಯ ಪ್ರತೀಕವಾಗಿ ದಲಿತರ ಸ್ವಾಭಿಮಾನಿ ಸಂಕೇತವಾಗಿರುವ ವಿ. ಶ್ರೀನಿವಾಸಪ್ರಸಾದ್ ಅವರು ಸಾಮಾಜಿಕ ಬದ್ಧತೆಯ ಅಪರೂಪದ ಸಮಾಜಮುಖಿ ಹಿರಿಯ ರಾಜಕೀಯ ಮುತ್ಸದ್ದಿ’ ಎಂದು ಹೇಳಿದರು.

ಶ್ರೀನಿವಾಸ ಪ್ರಸಾದ್ ಅಭಿಮಾನ ಬಳಗದ ಅಧ್ಯಕ್ಷ ರಾಮಸಮುದ್ರದ ಬಸವರಾಜು ಅವರು ಮಾತನಾಡಿ, ‘ಶ್ರೀನಿವಾಸಪ್ರಸಾದ್ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ರಕ್ತದಾನ ಶಿಬಿರ, ಗಿಡ ನೆಡುವುದು, ಬಡವರಿಗೆ ಬಟ್ಟೆ ವಿತರಣೆ ಹೀಗೆ ಮೊದಲಾದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಕೋವಿಡ್‌ ಕಾರಣದಿಂದ ದೀನಬಂಧು ಆಶ್ರಮ ಶಾಲೆ ಮಕ್ಕಳಿಗೆ ಉಪಹಾರ ವಿತರಣೆ ಹಾಗೂ ವಿವಿಧ ಕ್ಷೇತ್ರ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದರು.

ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕಲೆ ನಟರಾಜು, ರಿದಂ ರಾಮಣ್ಣ, ರಾಮಸಮುದ್ರದ ಆರ್.ಎಂ. ಅಶೋಕ್, ಮಹೇಶ್, ಮಂಜುನಾಥ್ ಇತರರು ಇದ್ದರು.

ಕೋವಿಡ್‌ ಯೋಧರಿಗೆ ಸನ್ಮಾನ: ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ 75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಮತ್ತೊಂದು ಅಭಿಮಾನಿ ಬಳಗದ ಪದಾಧಿಕಾರಿಗಳು ಪಾರ್ವತಿ ಬಾಲಾಶ್ರಮದಲ್ಲಿ ಕೇಕ್ ಕತ್ತರಿಸಿ, ಮಕ್ಕಳೊಂದಿಗೆ ಉಪಹಾರ ವಿತರಿಸಿ, ಸನ್ಮಾನ ಹಾಗೂ ಕೋವಿಡ್‌ ಯೋಧರಾದ ಆಂಬುಲೆನ್ಸ್‌ ಚಾಲಕರನ್ನು ಸನ್ಮಾನಿಸಿದರು. ಅಲ್ಲದೇ ಉಪ್ಪಾರ ಬೀದಿ ಶಾಲೆಯಲ್ಲಿ ಸಸಿಗಳನ್ನು ನೆಟ್ಟು ಸಂಭ್ರಮಿಸಿದರು.

ಅಭಿಮಾನಿ ಬಳಗದ ಶಿವಣ್ಣ, ರಾಮಸಮುದ್ರ ಪ್ರಸನ್ನ, ಸಿ.ಎಸ್. ಮಹದೇವನಾಯಕ, ಮಾಲಂಗಿಮೂರ್ತಿ, ಬಂಗಾರು(ಚಿಗುರು) ರಾಜಗೋಪಾಲ್, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪರಶಿವಯ್ಯ, ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ ಅನಂತಕುಮಾರ್, ಆನಂದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.