ADVERTISEMENT

ಭತ್ತಕೃಷಿ: ಪರಿಸರ ಸ್ನೇಹಿ ವಿಧಾನಕ್ಕೆ ಮೊರೆ

ಜೆ–ಪಾಲ್‌ ಸಂಸ್ಥೆ ಜತೆಗೆ ರಾಜ್ಯ ಸರ್ಕಾರ ಒಡಂಬಡಿಕೆ; ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕ ಅನುಷ್ಠಾನ

ಕೆ.ಎಂ.ಸಂತೋಷ್‌ ಕುಮಾರ್‌
Published 24 ಆಗಸ್ಟ್ 2025, 12:30 IST
Last Updated 24 ಆಗಸ್ಟ್ 2025, 12:30 IST
ಸಾಂಕೇತಿಕ ಚಿತ್ರ– ಪ್ರಜಾವಾಣಿ 
ಸಾಂಕೇತಿಕ ಚಿತ್ರ– ಪ್ರಜಾವಾಣಿ    
ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕ ಅನುಷ್ಠಾನ | ಈಗಾಗಲೇ 210 ರೈತರು ನೋಂದಣಿ | ಪ್ರತಿ ಎಕರೆಗೆ ₹4.5 ಸಾವಿರ ಪ್ರೋತ್ಸಾಹ ಧನ

ಮೈಸೂರು: ಸಾಂಪ್ರದಾಯಿಕ ವಿಧಾನ ಬಿಟ್ಟು, ‘ಎಡಬ್ಲ್ಯುಡಿ/ ಡಿಎಸ್‌ಆರ್‌’ ಪದ್ಧತಿಯಲ್ಲಿ ಭತ್ತ ಕೃಷಿಗೆ ರೈತರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಚೆನ್ನೈನ ‘ದಿ ಅಬ್ದುಲ್‌ ಲತೀಫ್‌ ಜಮೀಲ್‌ ಪಾವರ್ಟಿ ಆ್ಯಕ್ಷನ್‌ ಲ್ಯಾಬ್‌’ (ಜೆ–ಪಾಲ್‌) ಜೊತೆಗೆ ಕೃಷಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.‌  

ಪ್ರಾಯೋಗಿಕವಾಗಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ ತಾಲ್ಲೂಕುಗಳ ಹಳೇಬಾತಿ, ದೊಡ್ಡಬಾತಿ, ಕುಂದುವಾಡ, ಚಿರಡೋಣಿ, ಅರೆಹಳ್ಳಿಯಲ್ಲಿ ಪರ್ಯಾಯವಾಗಿ ನೀರು ನಿಲ್ಲಿಸುವುದು ಮತ್ತು ಬತ್ತಿಸುವುದು, ನೇರ ಬಿತ್ತನೆ ವಿಧಾನದ ಪದ್ಧತಿ ಜಾರಿಗೊಳಿಸಲಾಗುತ್ತದೆ. 210 ರೈತರು ನೋಂದಣಿ ಮಾಡಿಸಿದ್ದಾರೆ.

ರಾಜ್ಯದಲ್ಲಿ ಅಂದಾಜು 12.84 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಸಾಂಪ್ರದಾಯಿಕ ಶೈಲಿಯ ಬೇಸಾಯಕ್ಕೆ ಎಕರೆಗೆ ಸುಮಾರು 30 ಲಕ್ಷ ಲೀಟರ್‌ ನೀರು ಅಗತ್ಯವಿದೆ. ಅಲ್ಲದೆ, ಪ್ರತಿ ಎಕರೆಗೆ ಒಂದು ಅವಧಿಯಲ್ಲಿ 42 ಕೆ.ಜಿಯಷ್ಟು ಮೀಥೆನ್‌ ವಾತಾವರಣಕ್ಕೆ ಸೇರುತ್ತಿದೆ. 

ADVERTISEMENT

‘ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತಕ್ಕೆ 32 ಸಲ ನೀರು ಕೊಡಬೇಕು. ಹೊಸ ಪದ್ಧತಿಯಲ್ಲಿ 22–23 ಬಾರಿ ನೀಡಿದರೆ ಸಾಕು. ಇದರಿಂದ ಪ್ರತಿ ಎಕೆರೆಗೆ 3 ಲಕ್ಷದಿಂದ 5 ಲಕ್ಷ ಲೀಟರ್‌ ನೀರು ಉಳಿಸಬಹುದು. ಮಿಥೇನ್‌ ಸೇರ್ಪಡೆಯನ್ನು ಶೇ 40ರಷ್ಟು ತಗ್ಗಿಸಬಹುದು’ ಎನ್ನುವುದು ಜೆ–ಪಾಲ್‌ ಸಂಸ್ಥೆಯ ವಿವರಣೆ.

‘ಎಡಬ್ಲ್ಯುಡಿ/ ಡಿಎಸ್‌ಆರ್‌ ಪದ್ಧತಿ ಎಷ್ಟು ಲಾಭದಾಯಕ ಎಂದು ವೈಜ್ಞಾನಿಕವಾಗಿ ಅರಿತು ರಾಜ್ಯದಾದ್ಯಂತ ವಿಸ್ತರಿಸುವ ಉದ್ದೇಶವಿದೆ’ ಎಂದು ಕೃಷಿ ಇಲಾಖೆ ನಿರ್ದೇಶಕ ಜಿ.ಟಿ. ಪುತ್ರ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಕೆಎಆರ್‌ಎಸ್‌, ಹೇಮಾವತಿ, ಭದ್ರಾ, ತುಂಗಭದ್ರಾ, ಆಲಮಟ್ಟಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನಾಲೆಗಳ ಕೊನೆ ಭಾಗದ ಭತ್ತದ ಬೆಳೆಗಾರರು ನಾಲೆಯ ನೀರನ್ನು ಹೆಚ್ಚು ಅವಲಂಬಿಸುವುದೂ ತಪ್ಪಲಿದೆ’ ಎಂಬುದು ಇಲಾಖೆಯ ಹಿರಿಯ ಅಧಿಕಾರಿಗಳ ವಿಶ್ವಾಸದ ಮಾತು.

ಭತ್ತದ ನಾಟಿ
ನೆಲ ಜಲ ಪರಿಸರ ರಕ್ಷಣೆ ಬಗ್ಗೆ ರೈತರಿಗೆ ಅರಿವು ಮೂಡಿಸಿ ಈ ಪದ್ಧತಿಯನ್ನು ಜಾರಿಗೊಳಿಸುವುದು ನೀರು ಸಂರಕ್ಷಣೆ ದೃಷ್ಟಿಯಿಂದ ಅಗತ್ಯ
ಎನ್‌.ಚಲುವರಾಯಸ್ವಾಮಿ ಕೃಷಿ ಸಚಿವ

ರೈತರಿಗೆ ಪ್ರೋತ್ಸಾಹ ಧನ; ತಾಂತ್ರಿಕ ಸಲಹೆ

‘ಹೊಸ ಪದ್ದತಿಗೆ ಉತ್ತೇಜನ ನೀಡಲು ಪ್ರಾಯೋಗಿಕ ಹಂತದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನೋಂದಣಿ ಮಾಡಿಕೊಂಡಿರುವ ರೈತರು ಈ ಹಂಗಾಮಿನಿಂದಲೇ ಭತ್ತ ಬಿತ್ತನೆ ಮಾಡಿದ್ದಾರೆ’ ಎಂದು ಯೋಜನೆಯ ಮುಖ್ಯ ಸಂಶೋಧಕ ಬೆಂಗಳೂರಿನ ಬಿಜಿಎಸ್‌ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಪ್ರೊ.ಜಿ.ನವೀನ್‌ಕುಮಾರ್‌ ತಿಳಿಸಿದರು. ‘ಅಮೆರಿಕದ ಯೇಲ್‌ ವಿಶ್ವವಿದ್ಯಾಲಯದ ನಿಕೋಲಾಸ್‌ ರೈಯಾನ್‌ ಕ್ಯಾಲಿಫೋರ್ನಿಯಾ ಸ್ಯಾನ್‌ ಡಿಯಾಗೋ ವಿಶ್ವವಿದ್ಯಾಲಯದ ಪ್ರೊ.ಸ್ಟೀವನ್‌ ಬ್ರೌನ್‌ಸ್ಟೋನ್‌ ಅವರು ಇರುವ ಸಂಶೋಧನಾ ತಂಡ ತಾಂತ್ರಿಕ ಸಲಹೆ ನೀಡಲಿದೆ’ ಎಂದರು.   ‘ನೋಂದಾಯಿತ ರೈತರಿಗೆ ಪ್ರತಿ ಎಕರೆಗೆ ಒಟ್ಟು ₹4500 ಪ್ರೋತ್ಸಾಹ ಧನವನ್ನು ಜೆ–ಪಾಲ್‌ ಸಂಸ್ಥೆ ನೀಡಲಿದೆ. ಮುಂಗಡವಾಗಿ ₹500 ತಾಂತ್ರಿಕತೆ ಬಳಕೆ ಆಧಾರದಲ್ಲಿ ಎಕರೆಗೆ ₹4 ಸಾವಿರ ಹಾಗೂ 2 ಎಕರೆವರೆಗೆ ₹ 8500 ನೇರ ಖಾತೆಗೆ ಜಮೆ ಆಗಲಿದೆ’ ಎಂದರು. ಪ್ರೋತ್ಸಾಹ ಧನ ರೈತರ ಖಾತೆಗೆ ನೇರ ವರ್ಗಾವಣೆಯಾಗುತ್ತದೆ. ಬೆಳೆಗೆ ನೀರು ನಿಲ್ಲಿಸುವ ಮತ್ತು ಒಣಗಿಸುವ ಪ್ರಕ್ರಿಯೆಯನ್ನು ಉಪಗ್ರಹಗಳ ಚಿತ್ರಗಳನ್ನು ಆಧರಿಸಿ ಮೌಲ್ಯಮಾಪನ ನಡೆಸಲಾಗುವುದು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.