
ಗುಂಡ್ಲುಪೇಟೆ ತಾಲ್ಲೂಕಿನ ಮುಕ್ತಿ ಕಾಲೊನಿಯಲ್ಲಿ ಸೆರೆಯಾದ ಹುಲಿ
ಗುಂಡ್ಲುಪೇಟೆ: ತಾಲ್ಲೂಕಿನ ಮುಕ್ತಿ ಕಾಲೊನಿಯ ರೈತ ಲೋಕೇಶ್ ಎಂಬುವರ ಬಾಳೆ ತೋಟದಲ್ಲಿ ಅಡಗಿದ್ದ ಹುಲಿಯನ್ನು ಅರಿವಳಿಕೆ ನೀಡುವ ಮೂಲಕ ಅರಣ್ಯ ಇಲಾಖೆ ಸೆರೆ ಹಿಡಿಯಿತು.
ತೋಟದಲ್ಲಿ ಬೆಳಿಗ್ಗೆ ಹುಲಿ ಕಾಣಿಸಿಕೊಂಡು ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಹುಲಿ ಓಡಾಟದ ದೃಶ್ಯ ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು ವೈರಲ್ ಉಂಟಾಗಿತ್ತು.
ಇದರ ಆಧಾರದ ಮೇಲೆ ಬಾಳೆ ತೋಟದಲ್ಲಿ ಹುಲಿ ಕುರಿತು ಖಚಿತ ಮಾಹಿತಿ ಮೇರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು. ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಹಿಂಬದಿಯಿಂದ ಅರಿವಳಿಕೆ ಚುಚ್ಚು ಮದ್ದು ನೀಡಿ ಹುಲಿ ಸೆರೆ ಹಿಡಿದಿದ್ದಾರೆ. 7ರಿಂದ 8 ವರ್ಷದ ಗಂಡು ಹುಲಿ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆರೆ ಹಿಡಿದ ಹುಲಿಯ ಎದೆ ಹಾಗೂ ಹಿಂಬದಿ ಕಾಲಿನಲ್ಲಿ ಪರಚಿದ ಗಾಯವಿದೆ. ಸದ್ಯ ಮದ್ದೂರು ಅರಣ್ಯ ಕಚೇರಿಯಲ್ಲಿಯೇ ಹುಲಿ ಇರಿಸಲಾಗಿದ್ದು, ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿ ಆರೋಗ್ಯವಾಗಿದ್ದು, ವರದಿ ಬಂದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮದ್ದೂರು ವಲಯದ ಆರ್ಎಫ್ಒ ಪುನೀತ್ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಬಂಡೀಪುರ ಸಿಎಫ್ ಪ್ರಭಾಕರನ್, ಎಸಿಎಫ್ ಸುರೇಶ್, ಡಿಆರ್ಎಫ್ಒ ಶಿವಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.