
ಹನೂರು: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದಲ್ಲಿ ಹುಲಿಯ ಕಳೆಬರ ಪತ್ತೆಯಾಗಿರುವುದು ಈ ಭಾಗದಲ್ಲಿ ಪ್ರಾಣಿಗಳ ಬೇಟೆ ಪ್ರಕರಣಗಳು ಸಕ್ರಿಯವಾಗಿರುವುದಕ್ಕೆ ನಿದರ್ಶನವಾಗಿದೆ.
ಉರುಳಿಗೆ ಸಿಲುಕಿರುವ 5 ರಿಂದ 6 ವರ್ಷದ ಗಂಡು ಹುಲಿ ನರಳಾಡಿ ಜಲಾಶಯದ ಬಳಿ ಬಂದು ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿರುವುದು ಕಳ್ಳಬೇಟೆಯ ಅನುಮಾನ ಮೂಡಿಸಿದೆ. ಗುಂಡಾಲ್ ಜಲಾಶಯಕ್ಕೆ ಪ್ರವಾಸಿಗರ ಸೋಗಿನಲ್ಲಿ ಬರುವ ರಾಜ್ಯ ಹಾಗೂ ನೆರೆ ರಾಜ್ಯಗಳ ಕಳ್ಳಬೇಟೆಗಾರರು ಉರುಳುಗಳನ್ನು ಹಾಕಿ ಪ್ರಾಣಿಗಳನ್ನು ಬೇಟೆಯಾಡಿ ಚರ್ಮ, ಉಗುರು ಸಹಿತ ಪ್ರಮುಖ ಆವಯವಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ವನ್ಯಜೀವಿ ತಜ್ಞರು ದೂರುತ್ತಾರೆ.
ಜಲಾಶಯದ ಹಿನ್ನೀರು ಹಾಗೂ ಬಿಆರ್ಟಿ ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಬೇಕು, ಕಳ್ಳಬೇಟೆಗೆ ಬಂದಿರುವುದು ದೃಢವಾದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಈ ಭಾಗದಲ್ಲಿ ನಿರಂತರವಾಗಿ ಗಸ್ತು ಹೆಚ್ಚಿಸಬೇಕು, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸುತ್ತಾರೆ ಪ್ರಾಣಿಪ್ರಿಯರು.
ಹುಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉರುಳಿಗೆ ಸಿಲುಕಿ ದೈತ್ಯ ಹುಲಿ ಹುಲಿ ಮೃತಪಟ್ಟಿರುವುದು ಆತಂಕಕಾರಿ ವಿಚಾರವಾಗಿದ್ದು ಪ್ರಕರಣದ ಸಮಗ್ರ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.