ADVERTISEMENT

ಬಿಳಿಗಿರಿರಂಗನಬೆಟ್ಟದ ಸ್ವಾಮಿ ಪ್ರಣವಾನಂದ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 12:32 IST
Last Updated 16 ಆಗಸ್ಟ್ 2022, 12:32 IST
ಸ್ವಾಮಿ ಪ್ರಣವಾನಂದ
ಸ್ವಾಮಿ ಪ್ರಣವಾನಂದ   

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವಿಶ್ವ ಶಾಂತಿ ನಿಕೇತನ ಆಶ್ರಮದ ಸ್ವಾಮಿ ಪ್ರಣವಾನಂದ (84) ಅವರು ಮಂಗಳವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಾಲ್ಕು ದಿನಗಳ ಹಿಂದೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್‌) ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ.

ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರಾದ ಪ್ರಣವಾನಂದ ಅವರು 18 ವರ್ಷಗಳಿಂದ ಬಿಳಿಗಿರಿರಂಗನಬೆಟ್ಟದ ವಿಶ್ವ ಶಾಂತಿ ನಿಕೇತನ ಆಶ್ರಮದಲ್ಲಿ ಇದ್ದರು.

ADVERTISEMENT

ಸ್ವಾಮಿ ನಿರ್ಮಲಾನಂದ ಅವರು ಈ ಆಶ್ರಮವನ್ನು ಸ್ಥಾಪಿಸಿದ್ದರು. ಅವರ ನಿಧನದ ಬಳಿಕ ಬ್ರಹ್ಮದೇವ ಎಂಬುವವರು ಆಶ್ರಮದ ಜವಾಬ್ದಾರಿ ಹೊತ್ತಿದ್ದರು. ಬ್ರಹ್ಮದೇವ ಅವರು ಕೊಳ್ಳೇಗಾಲದ ದೊಡ್ಡಿಂದುವಾಡಿಯ ದತ್ತಾತ್ರೇಯ ದೇವಸ್ಥಾನದಲ್ಲಿದ್ದ ಸ್ವಾಮಿ ಪ್ರಣವಾನಂದ ಅವರಿಗೆ ಆಶ್ರಮದ ಉಸ್ತುವಾರಿ ನೀಡಿದ್ದರು.

‘25 ವರ್ಷ ವಯಸ್ಸಿನಲ್ಲೇ ಅಧ್ಯಾತ್ಮದ ಸೆಳೆತಕ್ಕೆ ಸಿಕ್ಕಿದ್ದ ಪ್ರಣವಾನಂದ ಅವರು ಊರು ತೊರೆದು ಹಿಮಾಲಯಕ್ಕೆ ತೆರಳಿದ್ದರು. 2001ರಲ್ಲಿ ಕೊಳ್ಳೇಗಾಲಕ್ಕೆ ಬಂದಿದ್ದರು. ಅಲ್ಲಿ ಮೂರು ವರ್ಷಗಳಿದ್ದು, ಅಲ್ಲಿಂದ ಬಿಳಿಗಿರಿರಂಗನಬೆಟ್ಟದ ಆಶ್ರಮಕ್ಕೆ ಬಂದಿದ್ದರು’ ಎಂದು ಭಕ್ತರು ಮಾಹಿತಿ ನೀಡಿದ್ದಾರೆ.

ನಿಧನದ ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ದರ್ಶನ ಪಡೆದರು. ಬಿಳಿಗಿರಿರಂಗನಬೆಟ್ಟದ ಆಶ್ರಮದಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಗುರುಚರಣ್‌, ವನ್ಯಜೀವಿ ಮಂಡಳಿಯ ಸದಸ್ಯ ಜಿ.ಮಲ್ಲೇಶಪ್ಪ ಇತರರು ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.