
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ‘ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಲು ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ, ಕಾಳಿ, ಮಡಿಕೇರಿ ವನ್ಯಧಾಮಗಳಲ್ಲಿ ಕಮಾಂಡ್ ಕೇಂದ್ರ ತೆರೆಯಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಬುಧವಾರ ಹೇಳಿದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಅವರು, ‘ಅರಣ್ಯದೊಳಗೆ ಗಸ್ತು ಹೆಚ್ಚಿಸಲು ಇದು ಸಹಕಾರಿ’ ಎಂದರು.
‘ಚಿಕ್ಕಮಗಳೂರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಹಾಸನ ವಲಯದಲ್ಲೂ ಸೆಂಟರ್ ತೆರೆಯಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕೇಂದ್ರವನ್ನು ಅಧಿವೇಶನದ ನಂತರ ಉದ್ಘಾಟಿಸಲಾಗುವುದು’ ಎಂದರು.
‘ಈ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ, ಥರ್ಮಲ್ ಡ್ರೋನ್ ಕ್ಯಾಮೆರಾ, ಆಧುನಿಕ ತಂತ್ರಜ್ಞಾನ ಆಧಾರಿತ ಪರಿಕರಗಳು ಇರಲಿದ್ದು, ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇರಿಸಲಾಗುವುದು. ಯಾವ ಗ್ರಾಮಗಳ ವನ್ಯಜೀವಿ ಬಳಿ ಬಂದಿವೆ ಎಂಬ ಅರಿತು ಕ್ರಮ ವಹಿಸಿ ಜೀವಹಾನಿ ತಡೆಯಬಹುದು’ ಎಂದರು.
‘ಸಿಬ್ಬಂದಿಯು ಕಾಡಿನಲ್ಲಿ ಎಷ್ಟು ಹೊತ್ತು ಗಸ್ತು ತಿರುಗುತ್ತಾರೆ ಎಂದು ಗಮನಿಸಲು ಇ-ಗಸ್ತು ತಂತ್ರಾಂಶ ರೂಪಿಸಿದ್ದು, ಎಂ.ಸ್ಟ್ರೈಪ್ ಜೊತೆಗೆ ಇದನ್ನೂ ಜಾರಿ ಮಾಡಿ ನಿಗಾ ಇರಿಸಬೇಕು’ ಎಂದು ಸಚಿವರು ಸೂಚಿಸಿದರು.
‘ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹುಲಿಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
ಸಿಬ್ಬಂದಿ ಕಾಡಿನಲ್ಲಿ ಎಷ್ಟು ಹೊತ್ತು ಗಸ್ತು ತಿರುಗುತ್ತಾರೆ ಎಂದು ಗಮನಿಸಲು ಇ-ಗಸ್ತು ತಂತ್ರಾಂಶ ರೂಪಿಸಿದ್ದು, ಎಂ.ಸ್ಟ್ರೈಪ್ ಜೊತೆಗೆ ಜಾರಿಗೆ ಸೂಚಿಸಲಾಗಿದೆಈಶ್ವರ ಖಂಡ್ರೆ, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.