ADVERTISEMENT

ಚಾಮರಾಜನಗರ: ಠಾಣೆ ಎದುರು‌‌ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟಿಸಿದ‌‌ ಮಹಿಳೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 16:11 IST
Last Updated 13 ಜೂನ್ 2020, 16:11 IST
ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಠಾಣೆಯ ಎದುರು ಮಳೆಯಲ್ಲೇ‌‌ ನೆನೆಯುತ್ತಾ ಪ್ರತಿಭಟಿಸಿದ ಸುಶೀಲಾ
ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಠಾಣೆಯ ಎದುರು ಮಳೆಯಲ್ಲೇ‌‌ ನೆನೆಯುತ್ತಾ ಪ್ರತಿಭಟಿಸಿದ ಸುಶೀಲಾ   

ಚಾಮರಾಜನಗರ: ಪೊಲೀಸರು ತಮಗೆ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ‌ ಮಹಿಳೆಯೊಬ್ಬರು ರಾಮಸಮುದ್ರ ಠಾಣೆಯ ಎದುರು ಮಳೆಯಲ್ಲೇ‌‌ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಇದೇ 10ರಂದು ನಡೆದಿದೆ.

ತಾಲ್ಲೂಕಿನ ಚಂದಕವಾಡಿ ನಿವಾಸಿ‌ ಸುಶೀಲಾ ಪ್ರತಿಭಟನೆ ‌ನಡೆಸಿದವರು.

ಚಂದಕವಾಡಿಯ ಫಾರೆಸ್ಟ್ ಸರ್ವೆ‌ ನಂಬರ್ 1/168ರಲ್ಲಿ ಸುಶೀಲಾ– ಶಿವಣ್ಣ ದಂಪತಿಯ ಜಮೀನಿದ್ದು, ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬುವರ ಜೊತೆ ಮಾಲೀಕತ್ವ ವಿಚಾರದಲ್ಲಿ ವಿವಾದ ಇದೆ ಎಂದು ಹೇಳಲಾಗಿದೆ.

ADVERTISEMENT

‘ಎಲ್ಲ ದಾಖಲೆಗಳು ನಮ್ಮ ಹೆಸರಿನಲ್ಲಿ ಇವೆ. ಆದರೂ ಕೃಷಿ ಮಾಡುವುದಕ್ಕೆ ತೊಂದರೆ ಕೊಡುತ್ತಿದ್ದಾರೆ. ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಹಾಗೂ ರಾಮಸಮುದ್ರ ಠಾಣೆಯಲ್ಲಿ ಮನವಿ ಮಾಡಿದ್ದೆ. ಪೊಲೀಸ್ ನಿಯೋಜನೆಗಾಗಿ 9ರಂದು ಶುಲ್ಕವನ್ನೂ ಪಾವತಿಸಿದ್ದೆ. ಆದರೆ ಪೊಲೀಸರು ಬಂದಿರಲಿಲ್ಲ. ಅದಕ್ಕಾಗಿ ಧರಣಿ ನಡೆಸಿದೆ’ ಎಂದು ಸುಶೀಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳೆ ಮಳೆಯಲ್ಲಿ ನೆನೆಯುತ್ತಿದ್ದರೂ, ಒಳಗೆ ಕರೆಯದೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರು, ‘ಈ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಆ ಮಹಿಳೆ ನನ್ನ‌ ಬಳಿ ಬಂದಿದ್ದರು. ಭದ್ರತೆ ಒದಗಿಸುವುದಾಗಿ ಹೇಳಿದ್ದೆ. ಘಟನೆ ಬಗ್ಗೆ ಠಾಣೆಯಿಂದ ವರದಿ ಕೇಳಿದ್ದೇನೆ. ಸಿಬ್ಬಂದಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಮಹಿಳೆಯನ್ನು ಠಾಣೆಗೆ ಬರುವಂತೆ ಸಿಬ್ಬಂದಿ ಕರೆದರೂ ಅವರು ಬಂದಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.