ಚಾಮರಾಜನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ ಎಸ್ಟಿ ಮುಖಂಡರ ಕುಂದುಕೊರತೆ ಸಭೆ ನಡೆಯಿತು
ಚಾಮರಾಜನಗರ: ‘ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಡ ಮಹಿಳೆಯರನ್ನು ನಿಯಮಗಳ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಲಿಸಿ ಕ್ರಮ ಜರುಗಿಸಬೇಕು ಎಂದು ಜೈಭುವನೇಶ್ವರಿ ಸಂಘದ ಮುಖ್ಯಸ್ಥ ಜಿ.ಬಂಗಾರು ಮನವಿ ಮಾಡಿದರು.
ಭಾನುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಎಸ್ಸಿ ಎಸ್ಟಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ದೂರದ ಗ್ರಾಮಗಳಿಂದ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದು, ಬೆಳಗಿನ ಉಪಾಹಾರ ಸೇವಿಸಲು ಅನುಮತಿ ನೀಡುತ್ತಿಲ್ಲ, ಐದು ನಿಮಿಷ ತಡವಾದರೂ ಗೈರು ಹಾಜರಿ ಹಾಕಲಾಗುತ್ತಿದೆ.
ಕೆಲಸದ ಅವಧಿಯಲ್ಲಿ ಒಮ್ಮೆ ಮಾತ್ರ ಮೂತ್ರ ವಿಸರ್ಜಿಸಲು ಅವಕಾಶ ನೀಡುವ ಮಹಿಳೆಯರ ಘನತೆಗೆ ಚ್ಯುತಿ ತರುವಂತಹ ಅಮಾನವೀಯ ನಿಯಮಗಳಿವೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗಳಿಗೆ ಭೇಟಿ ನೀಡಿ ಮಹಿಳೆಯರ ಅಹವಾಲು ಆಲಿಸಬೇಕು, ತಪ್ಪಿತಸ್ಥರ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಗರದ ಬಟ್ಟೆ ಅಂಗಡಿಗಳು, ಮೊಬೈಲ್ ಮಳಿಗೆಗಳಲ್ಲಿ ನಿಯಮ ಬಾಹಿರವಾಗಿ ಯುವತಿಯರನ್ನು ಹೆಚ್ಚುವರಿ ಅವಧಿಗೆ ದುಡಿಸಿಕೊಳ್ಳಲಾಗುತ್ತಿದ್ದು ನೆರವಿಗೆ ಧಾವಿಸಬೇಕು, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿ.ಬಂಗಾರು ಆಗ್ರಹಿಸಿದರು.
ದಲಿತ ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು, ಹನೂರು ತಾಲ್ಲೂಕಿನಲ್ಲಿ ಹೂಗ್ಯಂ, ಕುರಟ್ಟಿ ಹೊಸೂರು, ರಾಮಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ದಲಿತರನ್ನು ಹೋಟೆಲ್ನೊಳಗೆ ಬಿಟ್ಟುಕೊಳ್ಳುತ್ತಿಲ್ಲ, ಕ್ಷೌರದಂಗಡಿಗಳಲ್ಲಿ ಕ್ಷೌರ ಮಾಡುತ್ತಿಲ್ಲ. ಇಂತಹ ಅಮಾನವೀಯ ಆಚರಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಜನಜಾಗೃತಿ ಮೂಡಿಸಲು ಇಲಾಖೆಗಳು ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಗ್ರಾಮ ಮಟ್ಟದಲ್ಲೂ ಅಸ್ಪೃಶ್ಯತೆ ವಿರುದ್ಧ ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಕಲಹಗಳು ಹೆಚ್ಚಾಗಿ ಮಹಿಳೆಯರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದರು.
ಮುಖಂಡ ಸತೀಶ್ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಸಾಲ ದೊರೆಯುತ್ತಿಲ್ಲ. ಸರ್ಕಾರದ ಆದೇಶ ಇದ್ದರೂ ಸಾಲದ ಅರ್ಜಿ ತಿರಸ್ಕರಿಸಲಾಗುತ್ತಿದೆ, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕದಂಬ ವೇದಿಕೆ ಅಧ್ಯಕ್ಷ ಅಂಬರೀಶ್ ಮಾತನಾಡಿ, ಚಾಮರಾಜನಗರ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಕಾಲೇಜು ಹಾಗೂ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದೆ ರಾತ್ರಿಯ ಹೊತ್ತು ಅನೈತಿಕ ಚಟುವಟಿಕೆಗಳು, ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿವೆ. ಕಾಲೇಜುಗಳ ಹಾಸ್ಟೆಲ್ನೊಳಗೆ ಸುಲಭವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ವೇಣುಗೋಪಾಲ್ ಮಾತನಾಡಿ, ಕುಲುಮೆ ರಸ್ತೆಯಲ್ಲಿ ಮನಸ್ಸಿಗೆ ಬಂದಷ್ಟು ಹಂಪ್ಗಳನ್ನು ಹಾಕಲಾಗಿದೆ, ಹೆದ್ದಾರಿಯಿಂದ ರಾಮಸಮುದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕನಿಷ್ಠ 40 ಹಂಪ್ಗಳಿದ್ದು ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ, ಅವೈಜ್ಞಾನಿಕ ಹಂಪ್ಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ನಟರಾಜು ಎಂಬ ಯುವಕ ಈಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಅಪಘಾತಕ್ಕೆ ಕಾರಣನಾದ ವ್ಯಕ್ತಿಯ ಬಂಧನ ಆಗಿದೆಯೇ ಎಂಬ ಮಾಹಿತಿ ಇಲ್ಲವಾಗಿದೆ. ಮೃತ ಯುವಕ ಖಾಸಗಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಸಾಲ ವಸೂಲಾತಿಗೆ ಹೋಗುವಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಆದರೆ ಫೈನಾನ್ಸ್ ಮೃತ ನಟರಾಜ ಉದ್ಯೋಗಿಯೇ ಅಲ್ಲ ಎಂದು ಹೇಳುತ್ತಿದ್ದು ಈ ಬಗ್ಗೆ ತನಿಖೆ ನಡೆಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನ್ಯಾಯ ಕೊಡಿಸಬೇಕು ಎಂದು ಹೋರಾಟಗಾರ ಭಾನುಪ್ರಕಾಶ್ ಒತ್ತಾಯಿಸಿದರು.
ಮೃತ ಯುವಕನ ಮೊಬೈಲ್ ಪರಿಶೀಲಿಸಿ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಎಸ್ಪಿ ಕವಿತಾ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಮಂಜುನಾಥ್ ಹಾಗೂ ಬೆಳ್ಳಿಯಪ್ಪ ಮಾತನಾಡಿ, ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಕ್ರಮ, ಶಿಕ್ಷೆಯ ಪ್ರಮಾಣದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸಬೇಕು, ಕರಪತ್ರಗಳ ಹಂಚಿಕೆ ಮಾಡಬೇಕು ಎಂದರು.
ಸಿಮ್ಸ್ನಲ್ಲಿ ರೋಗಿಗಳಿಗೆ ಉಚಿತ ಔಷಧಿಗಳು ದೊರೆಯುತ್ತಿಲ್ಲ. ಕಮಿಷನ್ ಆಸೆಗೆ ವೈದ್ಯರು ಖಾಸಗಿ ಮೆಡಿಕಲ್ನಲ್ಲಿ ಸಿಗುವ ಔಷಧಗಳನ್ನು ಬರೆಯುತ್ತಿದ್ದು ಬಡ ರೋಗಿಗಳು ಹಣಕೊಟ್ಟು ಔಷಧ ಖರೀದಿಸಬೇಕಾಗಿದೆ. ಈ ಬಗ್ಗೆ ಡೀನ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಕ್ರಮ ವಹಿಸಿಲ್ಲ ಎಂದು ನಿಂಗರಾಜು ದೂರಿದರು.
ರಾಮಸಮುದ್ರದಲ್ಲಿ ಪೋಕ್ಸೋ ಪ್ರಕರಣ ಸಂಬಂಧ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಸಂತ್ರಸ್ತ ಬಾಲಕಿಗೆ ಹೆರಿಗೆಯಾಗುವ ಸಮಯ ಬಂದರೂ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸದಿರುವುದು ಬೇಸರದ ವಿಚಾರ ಎಂದು ಪರಶಿವ ಎಂಬುವರು ದೂರಿದರು.
ದೂರುಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಎಸ್ಪಿ ಭರವಸೆ ನೀಡಿದರು. ಚಾಮರಾಜನಗರ ಡಿವೈಎಸ್ಪಿ ಸ್ನೇಹಾ ರಾಜ್, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಇದ್ದರು.
2025ರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ 36 ಪ್ರಕರಣಗಳು ದಾಖಲಾಗಿವೆ. 26 ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ವಿಚಾರಣೆಯ ಹಂತದಲ್ಲಿವೆ. 8 ಪ್ರಕರಣಗಳ ತನಿಖೆ ನಡೆಸುವಂತೆ ಡಿಸಿಆರ್ಬಿಗೆ ವಹಿಸಲಾಗಿದೆ, 2 ಪ್ರಕರಣಗಳ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು ತೆರವಿಗೆ ಪೊಲೀಸ್ ಇಲಾಖೆಯಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಎಸ್ಪಿ ಬಿ.ಟಿ.ಕವಿತಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.