ಯಳಂದೂರು: ‘ನಾಯಕ ಸಮುದಾಯ ಸರ್ಕಾರದ ಸವಲತ್ತು ಬಳಸಿಕೊಂಡು ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಉನ್ನತ ಸಾಧನೆ ಮಾಡಬೇಕು’ ಎಂದು ತಾಲ್ಲೂಕು ನಾಯಕ ಮಂಡಳಿ ಅಧ್ಯಕ್ಷ ಮುರಳಿ ಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಈಚಗೆ ತಾಲ್ಲೂಕು ನಾಯಕ ಮಂಡಳಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮುದಾಯದ ಹೆಣ್ಣು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ತೋರುತ್ತಿಲ್ಲ. ಇದರಿಂದ ಸರ್ಕಾರದ ಶಿಷ್ಯ ವೇತನ ಪಡೆಯುವವರ ಸಂಖ್ಯೆ ಕುಸಿದಿದೆ. ಇದರಿಂದ ದೇಶ-ವಿದೇಶಗಳಲ್ಲಿ ಅಭ್ಯಾಸ ಮಾಡುವ ಅವಕಾಶಗಳಿಂದ ಸಮುದಾಯದ ಮಕ್ಕಳು ವಂಚಿತರಾಗಿದ್ದಾರೆ’ ಎಂದು ಹೇಳಿದರು.
ಪ.ಪಂ.ಸದಸ್ಯ ಮಹೇಶ್ ಮಾತನಾಡಿ, ‘ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಬಾಲ ಕಾರ್ಮಿಕ ವ್ಯವಸ್ಥೆಯಿಂದ ವಿಮುಖರಾಗಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬೇಕು. ಈ ದೆಸೆಯಲ್ಲಿ ಸಂಘ-ಸಂಸ್ಥೆಗಳು ನೆರವು ನೀಡಲಿವೆ’ ಎಂದು ತಿಳಿಸಿದರು.
ಗೌರವ ಅಧ್ಯಕ್ಷ ರಾಚನಾಯಕ, ಕಾರ್ಯದರ್ಶಿ ವೆಂಕಟಾಚಲ, ಖಜಾಂಚಿ ಉಮೇಶ್, ಪ.ಪಂ. ಸದಸ್ಯ ರಂಗನಾಥ್, ಮುಖಂಡರಾದ ಭೀಮಪ್ಪ, ಮಹೇಶ್, ಮಣಿಗಾರ್ ರಂಗನಾಥ್, ಬಿಳಿಗಿರಂಗನಾಯಕ, ಮಂಜು, ಬಂಗಾರನಾಯಕ, ಮದ್ದೂರು ಬಂಗಾರು, ಕಂದಹಳ್ಳಿ ಮಹೇಶ್ ಕುಮಾರ್, ಮಹದೇವಸ್ವಾಮಿ, ರಾಜಣ್ಣ, ಕಿಟ್ಟಿ, ರಾಮಚಂದ್ರು, ವರದನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.