ADVERTISEMENT

ಅಭಿವೃದ್ಧಿಗೆ ಜನಗಣತಿ ಸಹಕಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:05 IST
Last Updated 10 ಫೆಬ್ರುವರಿ 2011, 9:05 IST

ಶಿಡ್ಲಘಟ್ಟ:  ಅಭಿವೃದ್ಧಿ ಹಾಗೂ ಗಣತಂತ್ರ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯಲು ಜನಗಣತಿ ಅತ್ಯಗತ್ಯ ಮಾಹಿತಿ ನೀಡುತ್ತದೆ. ಈ ದೆಸೆಯಲ್ಲಿ ಎಲ್ಲರೂ ಅಧಿಕಾರಿಗಳೊಂದಿಗೆ ಸಹಕರಿಸಿ ನಿಖರ ಮಾಹಿತಿ ನೀಡುವಂತೆ ಶಾಸಕ ವಿ.ಮುನಿಯಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದರು.ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಬುಧವಾರ ಗಣತಿದಾರರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ಚುನಾವಣಾ ಇಲಾಖೆ, ರಾಜಸ್ವ ಇಲಾಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಗಣತಿದಾರರಿಗೆ ತರಬೇತಿ ನೀಡಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಮಾಹಿತಿಯನ್ನೂ ಗೌಪ್ಯವಾಗಿಡಲಾಗುತ್ತದೆ. ಆದ್ದರಿಂದ ನಾಗರಿಕರು ಮಾಹಿತಿ ನೀಡಲು ಹಿಂಜರಿಯಬಾರದು ಎಂದು ಹೇಳಿದರು.ತಹಶೀಲ್ದಾರ್ ಬಿ.ಮಲ್ಲಿಕಾರ್ಜುನ ಮಾತನಾಡಿ , ಈ ಬಾರಿ ಅಂಗವಿಕಲತೆ, ಉದ್ಯೋಗ ಮತ್ತು ಸಂತಾನ ಎಂಬ ಮೂರು ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ವಿನಯದಿಂದ,ಎಚ್ಚರಿಕೆಯಿಂದ ಹಾಗೂ ಸಂಯಮದಿಂದ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹತ್ತು ವರ್ಷಗಳಿಗೊಮ್ಮೆ ನಡೆಯುವ ಈ ಜನಗಣತಿಯಲ್ಲಿ 29 ಪ್ರಶ್ನೆಗಳಿವೆ. ಫೆ.28ರ ತನಕ ಈ ಗಣತಿ ಕಾರ್ಯ ನಡೆಯುತ್ತದೆ.ರಸ್ತೆ, ನೀರು, ಆರೋಗ್ಯ ಮುಂತಾದ ಸಾರ್ವಜನಿಕ ಸದುದ್ದೇಶಿತ ಕಾರ್ಯಯೋಜನೆಗಳಿಗೆ ಈ ಮಾಹಿತಿ ಪೂರಕವಾಗಿರುವುದರಿಂದ ಎಲ್ಲರೂ ಸಮರ್ಪಕ ಉತ್ತರಿಸಿ ಸಹಕರಿಸಿಬೇಕು ಎಂದು ತಿಳಿಸಿದ ಅವರು, ವಸತಿ ರಹಿತರ ಗಣತಿಗೆ ಪ್ರದೇಶಗಳನ್ನು ಗುರುತಿಸಿದ್ದು ಕಡೆಯ ದಿನ ಅವರ ಜನಗಣತಿಯನ್ನೂ ಸಹ ಮಾಡಲಾಗುವುದು ಎಂದು ತಿಳಿಸಿದರು.

 ತಾಲ್ಲೂಕಿಗೆ ಸಂಬಂಧಿಸಿದಂತೆ 408 ಬ್ಲಾಕ್‌ಗಳಿಗೆ 248 ಗಣತಿದಾರರು ಹಾಗೂ 38 ಮೇಲ್ವಿಚಾರಕರ ನೇಮಕವಾಗಿದೆ. ಮೊದಲು ಗೃಹಿಣಿ ಎಂದರೆ ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತಿತ್ತು.ಆದರೆ ಅವರೂ ಹೊಲದಲ್ಲಿ ತೋಟದಲ್ಲಿ ಮತ್ತಿತರ ಪರೋಕ್ಷವಾಗಿ ಆರ್ಥಿಕ ಕೆಲಸ ಕೈಗೊಳ್ಳುವುದರಿಂದ ಅದು ಸಹ ಒಂದು ಉದ್ಯೋಗವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿಷಯದ ಕುರಿತು ಸೂಕ್ತವಾದ ಮಾಹಿತಿ ನೀಡಿ ಸಹಕರಿಸುವಂತೆ ಕೋರಿದರು.

 ಈ ಸಂದರ್ಭದಲ್ಲಿ ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ನರಸಿಂಹಮೂರ್ತಿ, ನಾಗರಾಜ್, ಜಂಗಮಕೋಟೆ ನೋಡಲ್ ಅಧಿಕಾರಿ ಕೃಷ್ಣಪ್ಪ, ಮೇಲ್ವಿಚಾರಕ ಮೋಹನ್, ಗಣತಿದಾರ್ತಿ ವೆಂಕಟಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಭಕ್ತರಹಳ್ಳಿ ಮುನೇಗೌಡ, ಹಂಡಿಗನಾಳ ಗ್ರಾ.ಪಂ.ಅಧ್ಯಕ್ಷ ಅಶ್ವತ್ಥಬಾಬು, ಮಳ್ಳೂರು ನಾಗರಾಜ್, ಎಂ.ಎಂ.ಸ್ವಾಮಿ, ಎಲ್.ಮಧು, ರಾಜಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.