ಚಿಕ್ಕಬಳ್ಳಾಪುರ: ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಹೀಗಾಗಿ ಪ್ರತಿಯೊಬ್ಬರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಕುಪ್ಪಹಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ, ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕುಪ್ಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿತ್ತು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಕಳೆದ ನಾಲ್ಕೂವರೆ ವರ್ಷಗಳಲ್ಲಿ ₹ 12 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅನೇಕ ವಿವಿಧ
ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಈ ಭಾಗಗಳಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅರಸನಹಳ್ಳಿ ರಸ್ತೆ ಕಾಮಗಾರಿ, ಗೋಪಿನಾಥ ಬೆಟ್ಟಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ಬೆಟ್ಟದ ಮೇಲೆ ಯಾತ್ರಿ ನಿವಾಸಕ್ಕಾಗಿ ₹ 1.32 ಕೋಟಿ ವೆಚ್ಚ, ₹ 3.95 ಕೋಟಿ ವೆಚ್ಚದಲ್ಲಿ ಚದಲಪುರದಿಂದ ಕುಪ್ಪಹಳ್ಳಿಗೆ ಸಂಪರ್ಕಿಸುವ ರಸ್ತೆ, ಕೊತ್ತನೂರುನಲ್ಲಿ ₹ 36 ಲಕ್ಷ, ಅಂಗಟ್ಟ ಗ್ರಾಮ ₹ 29 ಲಕ್ಷ, ಈರೇನಹಳ್ಳಿ ಗ್ರಾಮ ₹ 5 ಲಕ್ಷ, ಕುಡುವತಿ ಗ್ರಾಮ ₹ 31.50ಲಕ್ಷ, ಚಿಕ್ಕಸಾಗರಹಳ್ಳಿ ₹ 10 ಲಕ್ಷ ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಾರ್ವಜನಿಕರು ವಿದ್ಯುತ್ ಸರಬರಾಜು, ಸ್ಮಶಾನ ಅಭಿವೃದ್ಧಿ, ನಿವೇಶನಗಳ ವಿತರಣೆ, ಚರಂಡಿಗಳ ಸ್ವಚ್ಛತೆ, ಪಡಿತರ ವಿತರಣಾ ಕೇಂದ್ರ ಸ್ಥಾಪನೆ ಸೇರಿದಂತೆ ಗ್ರಾಮಗಳ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ‘ಕೇಂದ್ರ ರಸ್ತೆ ನಿಧಿ’ ಯೋಜನೆಯಡಿ ತಾಲ್ಲೂಕಿನ ಗಂಗರೆಕಾಲುವೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗಂಗರೇಕಾಲುವೆ– ದಿಬ್ಬೂರು ರಸ್ತೆ ವಿಸ್ತರಣೆಗೊಳಿಸಿ ಅಭಿವೃದ್ಧಿಪಡಿಸುವ ₹ 5 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಜಿ.ಆರ್.ಶ್ರೀನಿವಾಸ್, ಅರಸನಹಳ್ಳಿ ಬಾಬು, ಗೋಪಾಲ್್, ನಾರಾಯಣಸ್ವಾಮಿ, ಶಿವಪ್ಪ, ಅಗಟ್ಟ ಚಂದ್ರ, ನಾಗೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.