ಚಿಕ್ಕಬಳ್ಳಾಪುರ: ಹನುಮ ಜಯಂತಿ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಎದುರಿನ ವೀರಾಂಜನೇಯಸ್ವಾಮಿ ದೇವಾಲಯದ ಬಳಿ ಭಾನುವಾರ ಸಂಜೆ ಕಡ್ಲೆಕಾಯಿ ಪರಿಷೆ, ಪಾನಕ ಸೇವೆ ಮತ್ತು ವೀರಾಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಆದಿಚುಂಚನಗಿರಿ ಮಠ, ಜಡಲತಿಮ್ಮನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ತರು ಪಾಲ್ಗೊಂಡಿದ್ದರು. ಮಠದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪೂಜೆ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.
ಜನರು ಮನದುಂಬಿ ಕಡ್ಲೆಕಾಯಿಗಳನ್ನು ಸವಿದರು. ಸಡಗರದ ಕರಗ ಮಹೋತ್ಸವ ಕೂಡ ನಡೆಯಿತು.
ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ರಥವು ಸುತ್ತು ಹಾಕಿದ ವೇಳೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ನಿರ್ಮಲಾನಂದನಾಥ ಸ್ವಾಮೀಜಿ ಕಡ್ಲೆಕಾಯಿಗಳನ್ನು ಬುಟ್ಟಿಯ ಮೂಲಕ ತೂರಿದಾಗ, ಅವುಗಳನ್ನು ಹಿಡಿಯಲು ಮಕ್ಕಳು ಮುಗಿಬಿದ್ದರು.
‘ಜಾತ್ರೆ ಆಚರಣೆ ಸಂಸ್ಕೃತಿಯ ಸೊಗಡಾಗಿದ್ದು, ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಕಡ್ಲೆಕಾಯಿ ಪರಿಷೆಗೆ ಪ್ರತಿ ವರ್ಷವೂ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಜಾತ್ರೆಯಲ್ಲಿ ಪಾಲ್ಗೊಂಡವರೆಲ್ಲರಿಗೂ ದೇವರ ಕೃಪೆಯಾಗಲಿ’ ಎಂದು ಸ್ವಾಮೀಜಿ ಹೇಳಿದರು.
‘ಹನುಮ ಜಯಂತಿ ಪ್ರಯುಕ್ತ ಪ್ರತಿ ವರ್ಷವೂ ನಾವು ಸಂಭ್ರಮ–ಸಡಗರದಿಂದ ಜಾತ್ರೆ ಆಯೋಜಿಸುತ್ತೇವೆ. ತಾಲ್ಲೂಕು ಅಲ್ಲದೇ ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯವನ್ನು ಎರಡು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿಪಡಿಸಲಾಯಿತು. ದೇವಾಲಯ ನಿರ್ಮಾಣಗೊಂಡಿರುವುದರಿಂದ ಜಾತ್ರೆಯೂ ವಿಶೇಷ ಕಳೆ ಪಡೆದುಕೊಂಡಿದೆ. ಭಕ್ತಾದಿಗಳು ಬೆಳಿಗ್ಗೆಯಿಂದ ಪೂಜೆ ಸಲ್ಲಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಎಂ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಇದಕ್ಕೂ ಮುನ್ನ ಮಠದ ಆವರಣದಿಂದ ದೇವಾಲಯದವರೆಗೆ ಮಹಿಳೆಯರು ತಲೆಯ ಮೇಲೆ ಕಳಶಗಳನ್ನು ಇಟ್ಟುಕೊಂಡು ನಡೆದುಕೊಂಡು ಬಂದರು. ಮಠದ ಮಂಗಳನಾಂದನಾಥ ಸ್ವಾಮೀಜಿ, ಸಿದ್ಧೇಶ್ವರನಾಥ ಸ್ವಾಮೀಜಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.