ADVERTISEMENT

ಸಾರಿಗೆ ವ್ಯವಸ್ಥೆ ಬಳಸಿ, ಮಾಲಿನ್ಯ ತಗ್ಗಿಸಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 8:31 IST
Last Updated 1 ಡಿಸೆಂಬರ್ 2017, 8:31 IST

ಚಿಕ್ಕಬಳ್ಳಾಪುರ: ‘ವಾಯು ಮಾಲಿನ್ಯ ನಿಯಂತ್ರಣ ಮಾಸ’ದ ಪ್ರಯುಕ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಿಂದ ಇತ್ತೀಚೆಗೆ ತಾಲ್ಲೂಕಿನ ಪೆರೇಸಂದ್ರದಲ್ಲಿರುವ ಶಾಂತಾ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಹನಗಳ ಹೊಗೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ, ‘ವಾಹನಗಳಿಂದ ಹೊರಸೂಸುವ ಕೆಟ್ಟ ಹೊಗೆಯಿಂದ ಮಕ್ಕಳು ಹಾಗೂ ವೃದ್ಧರಿಗೆ ಶ್ವಾಸಕೋಶದ ತೊಂದರೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ವಾಯುಮಾಲಿನ್ಯದಿಂದ ಅನೇಕ ದುಷ್ಪರಿಣಾಮಗಳು ಬೀರಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ’ ಎಂದು ಹೇಳಿದರು.

‘ಪ್ರತಿಯೊಂದು ವಾಹನದ ಮಾಲೀಕರು ಕಾಲಕಾಲಕ್ಕೆ ಸರ್ವಿಸ್‌ ಮಾಡಿಸುವ ಮೂಲಕ ವಾಹನದ ಎಂಜಿನ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅದರಿಂದ ಕಲುಷಿತ ಹೊಗೆ ಹೊರಹೊಮ್ಮುವುದು ತಡೆಗಟ್ಟುವ ಜತೆಗೆ ಇಂಧನ ಉಳಿತಾಯ ಮಾಡಬಹುದು. ಯಾವುದೇ ಕಾರಣಕ್ಕೂ ವಾಹನಗಳಿಗೆ ಕಲಬೆರಕೆ ಇಂಧನ ಉಪಯೋಗಿಸಬಾರದು’ ಎಂದು ತಿಳಿಸಿದರು.

ADVERTISEMENT

‘ಅತಿಯಾಗಿ ವೈಯಕ್ತಿಕ ವಾಹನಗಳ ಬಳಕೆ ಬದಲು ಸಾರಿಗೆ ವ್ಯವಸ್ಥೆ ಬಳಸಿದರೆ ವಾಯು ಮಾಲಿನ್ಯ ತಗ್ಗಿಸಬಹುದು. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿದರೆ ನಮ್ಮ ಉಸಿರಾಟಕ್ಕೆ ಅಗತ್ಯವಾದ ಉತ್ತಮ ಗಾಳಿ ದೊರೆಯುತ್ತದೆ’ ಎಂದು ತಿಳಿಸಿದರು. ವಿದ್ಯಾರ್ಥಿಗಳು ಈ ವಿಚಾರವನ್ನು ಗಮನ
ದಲ್ಲಿಟ್ಟುಕೊಂಡು ಮನೆಯಲ್ಲಿ ಮತ್ತು ನೆರೆಹೊರೆಯವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದರು.

ತನಿಖಾಧಿಕಾರಿ ಕಮಲ್‌ ಬಾಬು ಮಾತನಾಡಿ, ‘ವಾಯು ಮಾಲಿನ್ಯದಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆ ವತಿಯಿಂದ ಪ್ರತಿವರ್ಷವೂ ವಾಯುಮಾಲಿನ್ಯ ನಿಯಂತ್ರಣಾ ಮಾಸ ಎಂದು ಒಂದು ತಿಂಗಳ ಕಾಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ಅವರು ಹೇಳಿದರು.

‘ಒಂದು ತಿಂಗಳ ಪೂರ್ತಿ ಜಿಲ್ಲೆಯಾದ್ಯಂತ ಆರ್‌ಟಿಒ ಕಚೇರಿ ವತಿಯಿಂದ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳಿದರು. ‘ಚಾಲಕರ ದೃಷ್ಟಿದೋಷ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ವಾಹನಕ್ಕೆ ಗುಣಮಟ್ಟದ ಇಂಧನವನ್ನೇ ಬಳಸಬೇಕು ಎನ್ನುವ ವಿಚಾರವನ್ನು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.