
ಚಿಂತಾಮಣಿ: ಪುರಾಣ ಪ್ರಸಿದ್ಧ ಆಲಂಬಗಿರಿಯ ಕಲ್ಕಿ ವೆಂಕಟರಮಣ ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.
ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಿಲ್ಲಿಸಿದ ನಂತರ ನೂರಾರು ಭಕ್ತರು ದೇವಾಲಯದಿಂದ ಸಾಮೂಹಿಕ ಸಂಕೀರ್ತನೆಯೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಿರುವ ಶಂಕು-ಚಕ್ರದ ವಿಶೇಷ ವೇದಿಕೆಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಗಣೇಶನ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ವೇದಿಕೆಯಿಂದ ಹೊರಟ ಭಕ್ತರು ಬೆಟ್ಟದ ಸುತ್ತಲೂ 3 ಕೀರ್ತನೆಗಳನ್ನು ಹಾಡುತ್ತಾ ಪ್ರದಕ್ಷಿಣೆ ಮಾಡಿದರು. ಸುಮಾರು ಒಂದು ಕಿ.ಮೀ ದೂರ ತೆರಳಿ, ಮತ್ತೆ ವೇದಿಕೆಗೆ ಆಗಮಿಸಿದರು. ಬೆಟ್ಟದ ಪ್ರಕೃತಿ ಮಡಿಲಲ್ಲಿ ಸುಂದರ ವಾತಾವರಣದಲ್ಲಿ ಮುತ್ಸಂಜೆ ಗಿರಿಪ್ರದಕ್ಷಿಣೆಯು ಅಹ್ಲಾದಕರವಾಗಿತ್ತು.
ಭಕ್ತರು ವೇದಿಕೆ ಸ್ಥಳದಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಪಾಹಿಮಾಂ ಪ್ರಭೋ ಕೀರ್ತನೆಯನ್ನು ಸಮರ್ಪಿಸಿದರು. ಎತ್ತರದಲ್ಲಿ ಸ್ಥಾಪಿಸಿರುವ ದೀಪಸ್ತಂಭದಲ್ಲಿ ಮೊದಲಿಗೆ ಧರ್ಮಾಧಿಕಾರಿ ತುಪ್ಪದ ದೀಪ ಬೆಳಗಿದರು. ನಂತರ ಎಲ್ಲ ಭಕ್ತರು ತುಪ್ಪ, ಎಣ್ಣೆ ದೀಪಕ್ಕೆ ಸಮರ್ಪಿಸಿದರು.
ಸುತ್ತಮುತ್ತಲ ಗ್ರಾಮಗಳ ಭಕ್ತರು, ಚಿಂತಾಮಣಿ, ಬೆಂಗಳೂರು, ದೇವನಹಳ್ಳಿ, ಹೋಸಕೋಟೆ ಮತ್ತಿತರ ಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಭಕ್ತರು ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.